newsics.com/ನ್ಯೂಸಿಕ್ಸ್
ಬಾಲಿವುಡ್ನ ಅತ್ಯಂತ ಪ್ರತಿಭಾವಂತ ನಟರಲ್ಲಿ ಪಂಕಜ್ ತ್ರಿಪಾಠಿ ಒಬ್ಬರು. ‘ಮಿರ್ಜಾಪುರ’ದ ಕಾಲೀನ್ ಭಯ್ಯಾ ಅಂದ ಕೂಡಲೇ ಅವರ ಗತ್ತು ಮತ್ತು ಸೌಮ್ಯ ನಟನೆ ಎಲ್ಲರಿಗೂ ನೆನಪಾಗುತ್ತದೆ.
ತಮ್ಮ ನಟನಾ ಕನಸನ್ನು ಹೊತ್ತು 2001ರಲ್ಲಿ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿದಾಗ ತಾವು ಎದುರಿಸಿದ ಸಾಂಸ್ಕೃತಿಕ ಆಘಾತ ಮತ್ತು ಭಾಷಾ ತಾರತಮ್ಯದ ಬಗ್ಗೆ ಪಂಕಜ್ ಇತ್ತೀಚಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಯೂಟ್ಯೂಬ್ ಚಾನೆಲ್ ‘ಯುವಾ’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಪಂಕಜ್, ‘2001ರಲ್ಲಿ ನಾನು ದೆಹಲಿಗೆ ಬಂದಾಗ ನನಗೆ ದೊಡ್ಡ ಕಲ್ಚರಲ್ ಶಾಕ್ ಎದುರಾಗಿತ್ತು. ಅಲ್ಲಿ ಮೊದಲ ಬಾರಿಗೆ ಹುಡುಗಿಯರು ಸಿಗರೇಟ್ ಸೇದುವುದನ್ನು ನೋಡಿದಾಗ, ‘ಇವರು ಎಂತಹ ಹುಡುಗಿಯರು?’ ಎಂದು ಆಶ್ಚರ್ಯಪಟ್ಟುಕೊಂಡಿದ್ದೆ. ಆದರೆ, ಒಂದು 15 ದಿನಗಳ ನಂತರ ನನ್ನ ಆಲೋಚನಾ ಶೈಲಿ ತಪ್ಪಾಗಿತ್ತು ಮತ್ತು ಯಾರನ್ನೂ ಹಾಗೆ ಅಳೆಯಬಾರದು ಎಂಬ ಸತ್ಯ ನನಗೆ ಅರ್ಥವಾಯಿತು’ ಎಂದು ತಮ್ಮ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಹಿಂದಿ ಮಾಧ್ಯಮದ ಹಿನ್ನೆಲೆಯಿಂದ ಬಂದಿದ್ದ ಪಂಕಜ್ ಅವರಿಗೆ ಭಾಷೆಯೇ ದೊಡ್ಡ ಸವಾಲಾಗಿತ್ತು. ‘ನನ್ನ ಭಾಷೆಯನ್ನು ನೋಡಿ ಜನರು ತಕ್ಷಣವೇ ನನ್ನನ್ನು ಜಡ್ಜ್ ಮಾಡುತ್ತಿದ್ದರು. ಒಬ್ಬ ವ್ಯಕ್ತಿಗೆ ಸರಾಗವಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದರೆ, ಅವನು ತುಂಬಾ ಬಡ ಹಿನ್ನೆಲೆಯಿಂದ ಬಂದಿದ್ದಾನೆ ಅಥವಾ ಅವನಿಗೆ ಜ್ಞಾನದ ಕೊರತೆ ಇದೆ ಎಂದೇ ಜನರು ಭಾವಿಸುತ್ತಾರೆ.
ಇಂದಿಗೂ ಜನರು ನಿಮ್ಮ ಸಾಮರ್ಥ್ಯವನ್ನು ನೀವು ಮಾತನಾಡುವ ಭಾಷೆಯ ಆಧಾರದ ಮೇಲೆ ಅಳೆಯುತ್ತಾರೆ. ಆದರೆ ವಾಸ್ತವದಲ್ಲಿ, ಭಾಷೆಗೂ ಮತ್ತು ಒಬ್ಬರ ಸಾಮರ್ಥ್ಯಕ್ಕೂ ಯಾವುದೇ ಸಂಬಂಧವಿರುವುದಿಲ್ಲ,’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.