newsics.com |ನ್ಯೂಸಿಕ್ಸ್
ಬೆಂಗಳೂರು: ನಾಮಕರಣ ಕಾರ್ಯಕ್ರಮಕ್ಕೆ ತವರು ಮನೆಯಲ್ಲಿದ್ದ ಪತ್ನಿ ಹಾಗೂ ಅವರ ಫ್ಯಾಮಿಲಿ ತಡವಾಗಿ ಬಂದಿದ್ದಕ್ಕೆ ಕೋಪಗೊಂಡ ಪತಿ ಸ್ವಂತ ಮಗುವನ್ನೇ ಎತ್ತಿ ನೆಲಕ್ಕೆ ಎಸೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇದರಿಂದ ಮಗುವಿನ ತಲೆಬುರುಡೆ ಮುರಿದುಹೋಗಿದ್ದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಕಲ್ಯಾಣ ಮಂಟಪವೊಂದರಲ್ಲಿ ಬೆಳಗ್ಗೆ ನಾಮಕರಣಕ್ಕೆ ಸಮಯ ನಿಗದಿಯಾಗಿತ್ತು. ನಿಗದಿಯಾದ ಸಮಯಕ್ಕಿಂತ ಒಂದು ಗಂಟೆ ಪತ್ನಿ ಹಾಗೂ ಅವರ ಫ್ಯಾಮಿಲಿ ತಡವಾಗಿ ಬಂದಿತ್ತು. ಇದರಿಂದ ಮಗುವಿನ ತಂದೆ ಕೋಪದಲ್ಲಿದ್ದ.
ಇದರಿಂದ ಆಕ್ರೋಶಗೊಂಡ ಪತಿ, ನೂರಾರು ಅತಿಥಿಗಳ ಸಮ್ಮುಖದಲ್ಲೇ ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ. ಎಲ್ಲರ ಮುಂದೆ ತನಗೆ ಅವಮಾನ ಮಾಡಿದ್ದೀರಿ ಎಂದು ಕೂಗಾಡಿ, ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ.
ಇದನ್ನು ತಡೆಯಲು ಬಂದ ಮಾವನ ಮೇಲೂ ಆತ ಮುಗಿಬಿದ್ದಿದ್ದಾನೆ. ಅಷ್ಟಕ್ಕೇ ನಿಲ್ಲದ ಈತ, ಮಾವನ ಕಂಕುಳಲ್ಲಿದ್ದ 11 ತಿಂಗಳ ಮಗುವನ್ನು ಬಲವಂತವಾಗಿ ಕಸಿದುಕೊಂಡು ಜೋರಾಗಿ ನೆಲಕ್ಕೆ ಎಸೆದಿದ್ದಾನೆ. ಮಗು ಕೆಳಗೆ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯಗಳಾಗಿವೆ. ಗಲಾಟೆ ಬಿಡಿಸಲು ಬಂದ ಹೋಟೆಲ್ ಸಿಬ್ಬಂದಿಗೂ ಈತ ಕಚ್ಚಿ ಗಾಯಗೊಳಿಸಿದ್ದಾನೆ.
ಈ ಸಂಬಂಧ ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಆತನಿಗೆ ಪ್ರಚೋದನೆ ನೀಡಿದ ಅತ್ತೆಯ ವಿರುದ್ಧ ಜುವೆನೈಲ್ ಜಸ್ಟಿಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಜೈಲಿನಲ್ಲಿದ್ದಾನೆ.