newsics.com/ನ್ಯೂಸಿಕ್ಸ್
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಜೂನ್ 10ಕ್ಕೆ 4,399 ದಿನಗಳನ್ನು ಪೂರ್ಣಗೊಳಿಸಲಿದ್ದಾರೆ. ಸ್ವಾತಂತ್ರ್ಯಾ ನಂತರ ಭಾರತದ ಮೊದಲ ಪ್ರಧಾನಿಯಾದ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಈ ಮೂಲಕ ಮೋದಿ ಮುರಿಯುತ್ತಿದ್ದಾರೆ.
ಕಳೆದ 12 ವರ್ಷಗಳಲ್ಲಿ ಅಭಿವೃದ್ಧಿ, ಆಡಳಿತದ ವಿಷಯದಲ್ಲಿ ಮೋದಿ ಸರ್ಕಾರ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಮಾತ್ರವಲ್ಲ, ದೇಶವನ್ನು ಅತಿ ದೀರ್ಘಾವಧಿಗೆ ಆಳಿದ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪ್ರಧಾನಿ ನರೇಂದ್ರ ಮೋದಿ ನಾಳೆ (ಜೂನ್ 10) ಪಾತ್ರರಾಗಲಿದ್ದಾರೆ. 2029ರ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಮುಂಬರುವ ಮೂರು ವರ್ಷಗಳಲ್ಲಿ ಸರ್ಕಾರದ ಹಾದಿ ಹೇಗಿರಲಿದೆ ಎಂಬುದು ಕುತೂಹಲಕರ.ಕಳೆದೊಂದು ದಶಕದಲ್ಲಿ ಭಾರತ ಬದಲಾಗಿದೆ ಮತ್ತು ಅಭಿವೃದ್ಧಿಯಲ್ಲಿ ವೇಗದ ಹೆಜ್ಜೆಗಳನ್ನು ಇರಿಸುತ್ತಿದೆ ಎಂಬುದನ್ನು ಜಾಗತಿಕ ವಲಯವೂ ಒಪ್ಪಿಕೊಂಡು, ಭಾರತದ ಜತೆಗಿನ ಸ್ನೇಹ ಸಂಬಂಧವನ್ನು ಬಲಗೊಳಿಸುತ್ತಿದೆ.
ಕಳೆದ ಹನ್ನೆರಡು ವರ್ಷಗಳಲ್ಲಿ (2014ರಿಂದ 2026ರವರೆಗೆ) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಆರ್ಥಿಕ, ಸಾಮಾಜಿಕ, ಮೂಲಸೌಕರ್ಯ ಮತ್ತು ವಿದೇಶಾಂಗ ನೀತಿಗಳಲ್ಲಿ ಹಲವು ಪ್ರಮುಖ ಬದಲಾವಣೆ ಹಾಗೂ ಸಾಧನೆಗಳನ್ನು ಮಾಡಿದೆ. ಮೋದಿ ಅವರ 12 ವರ್ಷದ ಅಧಿಕಾರಾವಧಿಯಲ್ಲಿ, ಉನ್ನತ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ಭಾರತವು ಗಮನಾರ್ಹ ವಿಸ್ತರಣೆಯನ್ನು ಕಂಡಿದೆ. 2014 ಮತ್ತು 2026ರ ನಡುವೆ ಐಐಟಿಗಳ ಸಂಖ್ಯೆ 16 ರಿಂದ 23ಕ್ಕೆ, ಐಐಎಂಗಳು 13 ರಿಂದ 21ಕ್ಕೆ ಮತ್ತು ಏಮ್ಸ್ ಸಂಸ್ಥೆಗಳು 7 ರಿಂದ 23ಕ್ಕೆ ಏರಿಕೆಯಾಗಿವೆ. ದೇಶಾದ್ಯಂತ 50,000 ಕಿಲೋಮೀಟರ್ಗಿಂತಲೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ವಿುಸಲಾಗಿದೆ. ಸೆಮಿ-ಹೈಸ್ಪೀಡ್ ‘ವಂದೇ ಭಾರತ್’ ರೈಲುಗಳ ಸಂಚಾರ ಮತ್ತು ರೈಲ್ವೆ ನಿಲ್ದಾಣಗಳ ಆಧುನೀಕರಣ ವೇಗವಾಗಿ ನಡೆದಿದೆ.
ಭಾರತ-ಪಾಕಿಸ್ತಾನ ವಿಭಜನೆಯಿಂದಾಗಿ ಲಕ್ಷಾಂತರ ಜನರು ನಿರಾಶ್ರಿತರಾದರು. ಕೋಮು ಗಲಭೆಗಳ ನಿಯಂತ್ರಣ, ನಿರಾಶ್ರಿತರಿಗೆ ವಸತಿ, ಆಹಾರ ಹಾಗೂ ಉದ್ಯೋಗ ನೀಡುವುದು ನೆಹರೂ ಅವರ ಮುಂದಿದ್ದ ಅತ್ಯಂತ ದೊಡ್ಡ ಸವಾಲಾಗಿತ್ತು.
ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಆರಂಭಿಕ ವರ್ಷಗಳಲ್ಲಿ ಎದುರಿಸಿದ ದೊಡ್ಡ ಸವಾಲು ಕೋವಿಡ್ ಸಾಂಕ್ರಾಮಿಕ. ಶತಮಾನಗಳ ಅವಧಿಯಲ್ಲಿ ದೇಶ ಎದುರಿಸಿದ ದೊಡ್ಡ ಬಿಕ್ಕಟ್ಟು. ದೇಶದಲ್ಲಿ ಲಾಕ್ಡೌನ್ ನಿರ್ವಹಣೆ, ಬಡವರಿಗೆ ಉಚಿತ ರೇಷನ್, ಆರೋಗ್ಯ ಮೂಲಸೌಕರ್ಯಗಳ ಕೊರತೆಯನ್ನು ನೀಗಿಸುವುದು, ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನವನ್ನು ನಡೆಸುವುದು ಒಂದು ಐತಿಹಾಸಿಕ ಸವಾಲಾಗಿತ್ತು.
1951–52ರ ಸಮಯದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುವುದು ಮತ್ತು ಸಂವಿಧಾನವನ್ನು ಜಾರಿಗೆ ತಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಸುಲಭದ ಮಾತಾಗಿರಲಿಲ್ಲ.
ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಭ್ರಷ್ಟಾಚಾರ, ಕಪ್ಪು ಹಣ ಪಿಡುಗಾಗಿ ಪರಿಣಮಿಸಿದೆ. ಇದನ್ನು ಮೂಲದಿಂದ ಕಿತ್ತೊಗೆಯುವ ಉದ್ದೇಶದಿಂದ 2016 ರಲ್ಲಿ ಜಾರಿಗೆ ತಂದ ನೋಟು ಅಮಾನ್ಯೀಕರಣ ಮತ್ತು ದೇಶದ ತೆರಿಗೆ ವ್ಯವಸ್ಥೆಯನ್ನು ಒಂದೇ ಸೂರಿನಡಿ ತರಲು ತಂದ ಜಿಎಸ್ಟಿ ವ್ಯವಸ್ಥೆಗಳ ಅನುಷ್ಠಾನದಿಂದಾಗಿ, ಆರಂಭದಲ್ಲಿ ಸರ್ಕಾರ ಆರ್ಥಿಕ ಮತ್ತು ಸಾರ್ವಜನಿಕ ಸವಾಲುಗಳನ್ನು ಎದುರಿಸಬೇಕಾಯಿತು.
ಜವಾಹರಲಾಲ್ ನೆಹರೂ ಅವರ ಕಾಲದಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿರದಿದ್ದ ಪ್ರಮುಖ ಮತ್ತು ಕಠಿಣ ನಿರ್ಧಾರಗಳನ್ನು ಮೋದಿ ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯ ರದ್ದತಿ, ಮುಸ್ಲಿಂ ಮಹಿಳೆಯರ ಹಿತರಕ್ಷಣೆಗಾಗಿ ಜಾರಿಗೆ ತಂದ ತಲಾಕ್ ನಿಷೇಧ ಕಾಯ್ದೆ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ನಿರ್ಮಾಣ ಮುಂತಾದ ಐತಿಹಾಸಿಕ ತೀರ್ಮಾನಗಳು ಮೋದಿ ಅವರ ಆಡಳಿತಾವಧಿಯ ಪ್ರಮುಖ ಮೈಲಿಗಲ್ಲುಗಳಾಗಿವೆ.
ಶ್ರೀರಾಮ ದಶರಥನಿಗೆ ಹುಟ್ಟಿದವ ಅಲ್ಲ : ನಾಲಿಗೆ ಹರಿಬಿಟ್ಟ ಪ್ರೊ.ಕೆ.ಎಸ್.ಭಗವಾನ್