newsics.com/ನ್ಯೂಸಿಕ್ಸ್
ವಯಸ್ಕರುತಮ್ಮ ಸ್ವಂತ ಇಚ್ಛೆಯಿಂದ ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಲು ಅಥವಾ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಯಾವುದೇ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಒಪ್ಪಿಗೆಯಿಂದ ನಡೆಯುವ ವೃತ್ತಿ ಅಪರಾಧವಲ್ಲ
ದೇಶದ ಹಳೆಯ ಅನೈತಿಕ ಸಂಚಾರ ತಡೆ ಕಾಯ್ದೆಯನ್ನು (ಐಟಿಪಿಎ) ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಲಯ, ವೇಶ್ಯಾಗೃಹ ನಡೆಸುವುದು ಕಾನೂನುಬಾಹಿರ ಚಟುವಟಿಕೆಯಾಗಿದ್ದರೂ, ಇಬ್ಬರ ಪರಸ್ಪರ ಒಪ್ಪಿಗೆಯಿಂದ ನಡೆಯುವ ಲೈಂಗಿಕ ವೃತ್ತಿ ಕಾಯ್ದೆಯಡಿ ಅಪರಾಧವಲ್ಲ ಎಂದು ಸ್ಪಷ್ಟಪಡಿಸಿದೆ. ಬಲವಂತವಿಲ್ಲದೆ ಈ ವೃತ್ತಿ ಆಯ್ದುಕೊಂಡ ಜನರ ಹಕ್ಕುಗಳನ್ನು ಕಾನೂನು ವ್ಯವಸ್ಥೆಯು ಹೇಗೆ ನೋಡಬೇಕು ಎಂಬುದರ ಕುರಿತು ಈ ತೀರ್ಪು ಅತ್ಯಂತ ಮಹತ್ವದ ದಿಕ್ಸೂಚಿಯಾಗಿದೆ.
ಕಿರುಕುಳ ನೀಡದಂತೆ ಆದೇಶ
ಲೈಂಗಿಕ ಕಾರ್ಯಕರ್ತರ ಪುನರ್ವಸತಿಗೆ ಸಂಬಂಧಿಸಿದಂತೆ ಮಹತ್ವದ ಸೂಚನೆಗಳನ್ನ ನೀಡಿರುವ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ನ್ಯಾಯಪೀಠ, ಸ್ವಇಚ್ಛೆಯಿಂದ ಈ ವೃತ್ತಿಯಲ್ಲಿರುವ ವಯಸ್ಕರಿಗೆ ಪೊಲೀಸರು ಅನಗತ್ಯ ಕಾನೂನು ಒತ್ತಡ ಹೇರಬಾರದು ಮತ್ತು ಕಿರುಕುಳ ನೀಡಬಾರದು ಎಂದು ಹೇಳಿದೆ. ತಮ್ಮ ಸ್ವಂತ ನಿರ್ಧಾರದಂತೆ ಬದುಕುತ್ತಿರುವ ವಯಸ್ಕರನ್ನು ಆ ಜಾಗದಿಂದ ರಕ್ಷಣೆ ಮಾಡುವ ಅಗತ್ಯವಿಲ್ಲ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ದಾಳಿಯ ನೆಪದಲ್ಲಿ ನಡೆಸಲಾಗುವ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮರುಪರಿಶೀಲನೆ ಆಗಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದೇ ವೇಳೆ, ಲೈಂಗಿಕ ಕಾರ್ಯಕರ್ತರ ಪುನರ್ವಸತಿ ಪ್ರಕ್ರಿಯೆಯು ಅವರ ಘನತೆ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವಂತಿರಬೇಕು ಎಂದು ನ್ಯಾಯಾಲಯ ಒತ್ತಿಹೇಳಿದೆ. ಯಾವುದೇ ವ್ಯಕ್ತಿಯ ಇಷ್ಟಕ್ಕೆ ವಿರುದ್ಧವಾಗಿ ಅವರನ್ನ ಪುನರ್ವಸತಿ ಕೇಂದ್ರಗಳಲ್ಲಿ ಬಲವಂತವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಸಂತ್ರಸ್ತರಿಗೆ ಸಹಾಯ ಮಾಡುವುದು ಮತ್ತು ಬೆಂಬಲ ನೀಡುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವೇ ಹೊರತು, ಅವರ ಒಪ್ಪಿಗೆಯಿಲ್ಲದ ಪ್ರಕ್ರಿಯೆಗಳಿಗೆ ಅವರನ್ನು ಬಲವಂತವಾಗಿ ದೂಡುವುದಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಈ ಮೂಲಕ ಲೈಂಗಿಕ ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳಬೇಕು ಮತ್ತು ಬಲವಂತದ ಕ್ರಮಗಳು ಸಂವಿಧಾನಬಾಹಿರ ಎಂದು ಸುಪ್ರೀಂ ಹೇಳಿದೆ
ವಾಣಿಜ್ಯ ಲೈಂಗಿಕ ಶೋಷಣೆ ಮತ್ತು ಮಾನವ ಕಳ್ಳಸಾಗಣೆಗೆ ಒಳಗಾದ ಸಂತ್ರಸ್ತರ ಮೂಲಭೂತ ಹಕ್ಕುಗಳ ರಕ್ಷಣೆಗೆ ಮಾರ್ಗಸೂಚಿ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ಈ ಐತಿಹಾಸಿಕ ತೀರ್ಪು ನೀಡಲಾಗಿದೆ. ವಯಸ್ಕ ಲೈಂಗಿಕ ಕಾರ್ಯಕರ್ತರ ಪುನರ್ವಸತಿ, ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆ ಮತ್ತು ಅವರನ್ನು ರಕ್ಷಣಾತ್ಮಕ ವಸತಿ ಗೃಹಗಳಲ್ಲಿ ಇರಿಸುವ ಮುನ್ನ ಅವರ ವೈಯಕ್ತಿಕ ಒಪ್ಪಿಗೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕೋರ್ಟ್ ಹೇಳಿದೆ. ವಿಚಾರಣೆ ವೇಳೆ ಹಿರಿಯ ವಕೀಲೆ ಅಪರ್ಣಾ ಭಟ್ ಅವರು ಮಂಡಿಸಿದ ಸಂತ್ರಸ್ತರ ರಕ್ಷಣಾ ಯೋಜನೆಯನ್ನು ಪುರಸ್ಕರಿಸಿದ ನ್ಯಾಯಾಲಯ, ಸಂತ್ರಸ್ತರು ಕೇವಲ ಸರ್ಕಾರದ ಆದೇಶಗಳನ್ನು ಮೂಕಪ್ರೇಕ್ಷಕರಂತೆ ಸ್ವೀಕರಿಸುವ ವಸ್ತುಗಳಲ್ಲ, ಅವರ ಆಯ್ಕೆಗಳೇ ಇಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಐಟಿಪಿಎ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿರುವ ಪಿತೃಪ್ರಧಾನ ಧೋರಣೆಯ ಧ್ವನಿಯನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್, ಈ ನಿಯಮದಲ್ಲಿರುವ ಲೋಪದೋಷಗಳನ್ನು ಎತ್ತಿ ತೋರಿಸಿದೆ. ಪ್ರಸ್ತುತ ಕಾನೂನು ಮಾನವ ಕಳ್ಳಸಾಗಣೆಗೆ ಒಳಗಾದವರು, ಬಲವಂತವಾಗಿ ಸಿಲುಕಿದವರು ಅಥವಾ ಸ್ವಯಂಪ್ರೇರಿತವಾಗಿ ವೃತ್ತಿ ಮಾಡುತ್ತಿರುವವರನ್ನೂ ಸೇರಿ ಹೀಗೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತದೆ. ಇಂತಹ ಏಕರೂಪದ ಧೋರಣೆಯು ಪ್ರತಿಯೊಬ್ಬ ವ್ಯಕ್ತಿಯ ವಿಭಿನ್ನ ವಾಸ್ತವಗಳನ್ನು ಪರಿಗಣಿಸುವುದಿಲ್ಲ. ಹೀಗಾಗಿ, ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ವ್ಯಕ್ತಿಯ ವೈಯಕ್ತಿಕ ಸಂದರ್ಭ ಮತ್ತು ಒಪ್ಪಿಗೆಯನ್ನು ಆಧರಿಸಿಯೇ ಕಾನೂನು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶಿಸುವ ಮೂಲಕ ಸುಪ್ರೀಂ ಕೋರ್ಟ್ ಲೈಂಗಿಕ ಕಾರ್ಯಕರ್ತರ ಹಕ್ಕುಗಳಿಗೆ ಹೊಸ ಭದ್ರತೆ ಒದಗಿಸಿದೆ.
ಲವ್ ಇನ್ಶೂರೆನ್ಸ್ ಕಂಪೆನಿ’ ಸಿನಿಮಾ ಸೋತಿದ್ದಕ್ಕೆ ವಿಘ್ನೇಶ್ ಶಿವನ್ಗೆ ಕೋಪ?