ಪಕ್ಷ ವಿರೋಧಿ ಚಟುವಟಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ನಡುವಿನ ‘ದಂಗಲ್’ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರ ಮೇಲೂ ಕ್ರಮ ಕೈಗೊಳ್ಳುವ ಬಗ್ಗೆ ಹೈಕಮಾಂಡ್ನಿಂದ ಸಂದೇಶ ಬಂದಿದೆ ಎಂಬ ಸುದ್ದಿ ಆಡಳಿತ ಪಕ್ಷದಲ್ಲೇ ವ್ಯಾಪಕ ಹರಡುತ್ತಿದೆ.ಇದು ಸಚಿವ ಜಮೀರ್ ಅವರನ್ನು ತುಸು ವಿಚಲಿತಗೊಳಿಸಿದೆ ಎನ್ನಲಾಗಿದೆ.
ಒಂದು ದಿನದ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸುಮಾರು ಒಂದೂವರೆ ತಾಸು ದಾವಣಗೆರೆ ಚುನಾವಣೆ ಕುರಿತು ಜಮೀರ್ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ವೇಳೆ ಹೈಕಮಾಂಡ್ನಿಂದ ಬಂದ ಸಂದೇಶದ ಸುಳಿವನ್ನು ನೀಡಿದ್ದಾರೆ. ಇದರ ಬೆನ್ನಲ್ಲೇ ಸಚಿವರು, ದೆಹಲಿಗೆ ಹಾರಲು ನಿರ್ಧರಿಸಿದ್ದರು. ಆದರೆ, ವರಿಷ್ಠರು ‘ಬ್ಯುಸಿ’ ಆಗಿರುವುದರಿಂದ ಭೇಟಿಗೆ ಅವಕಾಶ ಸಿಗುವ ಸಾಧ್ಯತೆಗಳು ತುಂಬಾ ಕಡಿಮೆ. ಹಾಗಾಗಿ, ಕೊನೆಕ್ಷಣದಲ್ಲಿ ಪ್ರಯಾಣ ಮುಂದೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕ್ರಮ ಖಚಿತ, ಆದ್ರೆ ಅದು ಯಾವುದು?:
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹಮದ್ ಮೇಲೆ ಕ್ರಮ ಆಗಿದೆ. ಮುಂದುವರಿದ ಭಾಗವಾಗಿ ಇನ್ನೂ ಕೆಲವರ ವಿರುದ್ಧ ಕ್ರಮ ಕೈಗೊಳ್ಳುವ ಸೂಚನೆ ಇದೆ. ಆದರೆ, ಆ ಕ್ರಮ ಯಾವ ರೀತಿ ಇರಬೇಕು? ಅದರ ಪರಿಣಾಮ ಪಕ್ಷದ ಮೇಲೆ ಹೇಗೆ ಆಗಬಹುದು? ತಕ್ಷಣಕ್ಕೇ ಕ್ರಮ ತೆಗೆದುಕೊಳ್ಳುವುದಾ ಅಥವಾ ಸಂಪುಟ ಪುನಾರಚನೆ ವೇಳೆ ಕ್ರಮ ತೆಗೆದುಕೊಳ್ಳುವುದಾ ಎಂಬ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.
ವದಂತಿ ಹರಡಿದೆ:
ಈ ವದಂತಿಗೆ ಪೂರಕವಾಗಿ ಮಾತನಾಡಿದ ಜಮೀರ್ ಅಹಮದ್, ‘ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಸಂಬಂಧಿಸಿದಂತೆ ನನ್ನ ಮೇಲೆ ಕ್ರಮವಾಗುತ್ತದೆ ಎಂಬ ವದಂತಿ ಹರಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈಗಾಗಲೇ ಚರ್ಚಿಸಿದ್ದು, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗುರುವಾರ ಭೇಟಿಯಾಗಿ ಮಾತನಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನಲ್ಲಿ ನಾನು ಬಹಳ ಸಣ್ಣವನು. ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಯಾರೂ ನನ್ನ ಹೆಸರು ಹೇಳಿ ಆರೋಪವನ್ನೂ ಮಾಡಿಲ್ಲ. ರಾಜಕಾರಣಕ್ಕೆ ಬಂದ ಮೇಲೆ ಯಾರೂ ಜಾತಿ ಮಾಡಬಾರದು. ಜಾತಿ ಎಲ್ಲವೂ ಮನೆಯಲ್ಲಿರಬೇಕು. ರಾಜಕಾರಣದಲ್ಲಿ ಜಾತಿ ಮಾಡಿದರೆ ಹುಳ ಬಿದ್ದು ಸಾಯುತ್ತಾರೆ. ನನ್ನದು ಬಡವರ ಜಾತಿ ಎಂದರು.
ಕ್ರಮದ ಸುಳಿಯಿಂದ ಹೊರಬರುವ ಕಸರತ್ತು:
ಇನ್ನೊಂದೆಡೆ ಜಮೀರ್ ಅಹಮದ್, ‘ಕ್ರಮದ ಸುಳಿ’ಯಿಂದ ತಪ್ಪಿಸಿಕೊಳ್ಳಲು ತಂತ್ರ ಹೆಣೆಯುವುದರಲ್ಲಿ ತಲ್ಲೀನರಾಗಿದ್ದಾರೆ. ಮುಖ್ಯಮಂತ್ರಿ ಭೇಟಿಯ ಮರುದಿನವೇ ಸಿಎಂ ರಾಜಕೀಯ ಕಾರ್ಯದರ್ಶಿಯಿಂದ ಬಿಡುಗಡೆಗೊಳಿಸಲಾದ ನಸೀರ್ ಅಹಮದ್ ಮನೆಗೆ ಧಾವಿಸಿದ್ದಾರೆ. ಅಲ್ಲಿ ಕೆಲಹೊತ್ತು ಇದೇ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಬಳಿಕ ಕುಮಾರಕೃಪಾ ಅತಿಥಿ ಗೃಹದ ಎದುರು ಇರುವ ಅಪಾರ್ಟ್ಮೆಂಟ್ವೊಂದರಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಡಿ.ಕೆ. ಶಿವಕುಮಾರ್ ಅವರನ್ನೂ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
ಇದಕ್ಕೆ ಪ್ರತಿಯಾಗಿ ‘ಪಕ್ಷದ ಅಭ್ಯರ್ಥಿ ಸೋಲಿಸಲು ಕೆಲ ಅಲ್ಪಸಂಖ್ಯಾತರೇ ಪ್ರಯತ್ನಿಸಿದ್ದರು’ ಎಂದು ಗಂಭೀರ ಆರೋಪ ಮಾಡಿರುವ ಶಾಸಕರಾದ ರಿಜ್ವಾನ್ ಅರ್ಷದ್, ಯಾಸಿರ್ ಪಠಾಣ್, ಸಲೀಂ ಅಹಮದ್ ಅವರೊಂದಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಿಎಂ ಭೇಟಿಯಾಗಿ ಇಡೀ ಬೆಳವಣಿಗೆಯ ವರದಿ ಒಪ್ಪಿಸಿದ್ದಾರೆ ಎನ್ನಲಾಗಿದೆ.