newsics.com
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಕ್ರಿಯ ರಾಜ್ಯ ರಾಜಕಾರಣಕ್ಕೆ ದಿಢೀರ್ ಗುಡ್ಬೈ ಹೇಳಿ ದೆಹಲಿಗೆ ಶಿಫ್ಟ್ ಆಗಲು ಡಿಸೈಡ್ ಮಾಡಿದ್ದಾರೆ.
ನಿತೀಶ್ ಕುಮಾರ್ ರಾಜ್ಯಸಭಾ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಸಂಸದೀಯ ಪ್ರಯಾಣದ ಆರಂಭದಿಂದಲೂ ಬಿಹಾರ ವಿಧಾನಸಭೆಯ ಎರಡೂ ಸದನಗಳ ಹಾಗೂ ಸಂಸತ್ತಿನ ಎರಡೂ ಸದನಗಳ ಸದಸ್ಯರಾಗಲು ಬಯಸಿದ್ದೆ ಎಂದು ಕುಮಾರ್ ಹೇಳಿದ್ದಾರೆ.
ಬಿಹಾರ ಸೇರಿದಂತೆ 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಇಂದು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.ಅವರು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಗಿದ್ದರು.
ನಿತೀಶ್ ಕುಮಾರ್ ಅವರು ‘X’ (ಟ್ವಿಟರ್) ಖಾತೆಯಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, “ಕಳೆದ ಎರಡು ದಶಕಗಳಿಂದ ನೀವು ನನ್ನ ಮೇಲಿಟ್ಟ ನಂಬಿಕೆ ಮತ್ತು ಬೆಂಬಲದಿಂದಾಗಿ ಬಿಹಾರಕ್ಕೆ ಸಂಪೂರ್ಣ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ. ನಿಮ್ಮಿಂದಲೇ ಬಿಹಾರ ಇಂದು ಅಭಿವೃದ್ಧಿ ಮತ್ತು ಗೌರವದ ಹೊಸ ಆಯಾಮ ಕಂಡಿದೆ, ಇದಕ್ಕಾಗಿ ನಿಮಗೆಲ್ಲರಿಗೂ ಅನಂತ ಧನ್ಯವಾದಗಳು” ಅಂತ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ರಾಜಕೀಯದ ಹೊಸ ಇನ್ನಿಂಗ್ಸ್ ಶುರುವಾಗುತ್ತಿರುವ ಬಗ್ಗೆ ಸ್ಪಷ್ಟ ಸುಳಿವು ಕೊಟ್ಟಿದ್ದಾರೆ.
ಅವರು ಈ ದಿಢೀರ್ ತೀರ್ಮಾನ ತಗೊಳ್ಳೋಕೆ ಪ್ರಮುಖ ಕಾರಣಗಳೆಂದರೆ, ಅವರ ಸಂಸದೀಯ ವೃತ್ತಿಜೀವನದ ಅಂತಿಮ ಆಸೆ! “ನನ್ನ ರಾಜಕೀಯ ಜೀವನದ ಆರಂಭದಿಂದಲೂ, ಬಿಹಾರದ ವಿಧಾನಸಭೆ ಮತ್ತು ವಿಧಾನ ಪರಿಷತ್ತು, ಹಾಗೂ ಕೇಂದ್ರದ ಲೋಕಸಭೆ ಮತ್ತು ರಾಜ್ಯಸಭೆ ಹೀಗೆ ನಾಲ್ಕೂ ಸದನಗಳ ಸದಸ್ಯನಾಗಬೇಕು ಅನ್ನೋದು ನನ್ನ ದೊಡ್ಡ ಕನಸಾಗಿತ್ತು” ಎಂದು ಹೇಳಿಕೊಂಡಿದ್ದಾರೆ. ಈಗಾಗಲೇ ಮೂರು ಸದನಗಳ ಅನುಭವ ಹೊಂದಿರುವ ಅವರು, ಈಗ ರಾಜ್ಯಸಭೆ ಮೆಟ್ಟಿಲೇರಿ ತಮ್ಮ ಆ ಸುದೀರ್ಘ ಕನಸನ್ನು ಪೂರ್ಣಗೊಳಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ಬಿಹಾರದ ದಿನನಿತ್ಯದ ಅಧಿಕಾರ ಹಗ್ಗಜಗ್ಗಾಟದಿಂದ ಘನತೆಯಿಂದ ಹೊರಬಂದು, ಕೇಂದ್ರದಲ್ಲಿ ದೊಡ್ಡ ಜವಾಬ್ದಾರಿ ತೆಗೆದುಕೊಳ್ಳಲು ಈ ತೀರ್ಮಾನ ಮಾಡಿದ್ದಾರೆ ಎನ್ನಲಾಗ್ತಿದೆ. ಸಕ್ರಿಯ ಹುದ್ದೆಯಿಂದ ಕೆಳಗಿಳಿದರೂ ಬಿಹಾರದ ಅಭಿವೃದ್ಧಿಗೆ ತಾವು ಸದಾ ಬದ್ಧ. ಹಾಗೆಯೇ, ರಚನೆಯಾಗುವ ಹೊಸ ಸರ್ಕಾರಕ್ಕೆ ಮತ್ತು ನಾಯಕತ್ವಕ್ಕೆ ತಾವೊಬ್ಬ ಮಾರ್ಗದರ್ಶಕನಾಗಿ (ಮೆಂಟರ್) ನಿಂತು ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.