https://youtube.com/shorts/2Z4I0oFUbOQ?si=E_8G5fLxr2N6s9QC
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ಉದ್ಯಮಿ ಸಿಜೆ ರಾಯ್ ಅವರು ಕಳೆದ ಆರು ತಿಂಗಳಿನಿಂದ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬುದು ಪೊಲೀಸರ ಈವರೆಗಿನ ತನಿಖೆಯಿಂದ ತಿಳಿದುಬಂದಿದೆ.
ರಾಯ್ ಅವರು ರಾಜ್ಯವಲ್ಲದೇ ದೇಶ, ವಿದೇಶಗಳಲ್ಲೂ ಸುಮಾರು 8 ಸಾವಿರ ಕೋಟಿಗೂ ಹೆಚ್ಚು ಸ್ಥಿರ-ಚರ ಆಸ್ತಿ ಹೊಂದಿದ್ದಾರೆ.
ಆದರೆ ಅವರು ಹೂಡಿಕೆಗೆ ಎಲ್ಲಿಯೂ ಬ್ಯಾಂಕ್ ಸಾಲ ಮಾಡಿಲ್ಲ ಎಂದು ತಿಳಿದುಬಂದಿದೆ.
ಬ್ಯಾಂಕ್ ಸಾಲವಿಲ್ಲದೆ ಇಷ್ಟೊಂದು ಅಪಾರ ಪ್ರಮಾಣದ ಹಣ ಅವರಿಗೆ ಎಲ್ಲಿಂದ ಬಂತು ಎಂಬುದು ಎಲ್ಲ ಉದ್ಯಮಿಗಳ ಪ್ರಶ್ನೆಯಾಗಿದೆ.
ಇವರ ಹೊಸ ಯೋಜನೆಗಳಿಗೆ ಕೆಲವು ರಾಜಕೀಯ ಗಣ್ಯ ವ್ಯಕ್ತಿಗಳು, ಕೆಲ ಉನ್ನತ ಮಟ್ಟದ ಅಧಿಕಾರಿಗಳು ಹೂಡಿಕೆ ಮಾಡಿದ್ದಾರೆ ಎಂಬುದು ಸಹ ತಿಳಿದುಬಂದಿದೆ.
ಈ ಹಣದ ಪೈಕಿ ಬಹುಪಾಲು ಅಕ್ರಮ ಹಣ (ಬ್ಲ್ಯಾಕ್ ಮನಿ)ಆಗಿರಬಹುದೆಂದು ತನಿಖಾ ಸಂಸ್ಥೆಗಳಿಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಕಾನ್ಫಿಡೆಂಟ್ ಸಂಸ್ಥೆ ಮೇಲೆ ಪದೇ ಪದೇ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ಮಾಡುತ್ತಿದ್ದುದರಿಂದ ಇವರ ಬಳಿ ಹೂಡಿಕೆ ಮಾಡಿದ್ದ ಹಣ ವಾಪಸ್ ಕೊಡುವಂತೆ ರಾಜಕಾರಣಿಗಳು, ಗಣ್ಯವ್ಯಕ್ತಿಗಳು, ಉನ್ನತ ಮಟ್ಟದ ಅಧಿಕಾರಿಗಳು ಒತ್ತಾಯಿಸುತ್ತಿದ್ದರೆಂಬ ಅನುಮಾನ ಈಗ ವ್ಯಕ್ತವಾಗಿದೆ.
ಒಂದು ವೇಳೆ ದಾಳಿ ಸಂದರ್ಭದಲ್ಲಿ ರಾಯ್ ಅವರು ತಮ್ಮ ಹೆಸರು ಎಲ್ಲಿ ಬಾಯ್ಬಿಡುತ್ತಾರೋ ಎಂಬ ಆತಂಕದಲ್ಲಿ ಹಣ ವಾಪಸ್ ಕೊಡುವಂತೆ ಅವರುಗಳೆಲ್ಲರೂ ಒತ್ತಾಯಿಸುತ್ತಿದ್ದರೆಂಬ ಕಾರಣಕ್ಕೆ ರಾಯ್ ಅವರು ಒತ್ತಡಕ್ಕೆ ಒಳಗಾಗಿದ್ದರೇ ಎಂಬ ಸಂಶಯ ಅಲ್ಲಗಳೆಯುವಂತಿಲ್ಲ.
ಐಟಿ ಅಧಿಕಾರಿಗಳಲ್ಲದೇ ಕೇಂದ್ರ ತನಿಖಾ ಸಂಸ್ಥೆಗಳೂ ರಾಯ್ ಅವರ ವ್ಯವಹಾರದತ್ತ ಕಣ್ಣಿಟ್ಟಿದ್ದವು. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ರಾಯ್ ಅವರು ಕಳೆದ ಆರು ತಿಂಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.
ರಾಯ್ ಅವರು ಕರ್ನಾಟಕ, ಕೇರಳ ಅಲ್ಲದೇ ದುಬೈ ಸೇರಿದಂತೆ ವಿದೇಶಗಳಲ್ಲಿಯೂ ತಮ್ಮ ವ್ಯವಹಾರವನ್ನು ವಿಸ್ತರಿಸಿದ್ದರು.
ರಾಯ್ ಅವರ ಹೊಸ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸುಆಗದ ಪರಿಣಾಮ ಹಣಕಾಸು ನಿರ್ವಹಣೆಯಲ್ಲಿ ಅವರು ವಿಫಲರಾಗಿದ್ದರು ಎಂಬ ಮಾತು ಕೇಳಿ ಬಂದಿದೆ.
ತಮ್ಮ ಜೀವನಶೈಲಿಯ ಅನುಗುಣಕ್ಕನುಸಾರವಾಗಿ ರಾಯ್ ಅವರು ಆದಾಯದ ಬಹುಪಾಲನ್ನು ಖರ್ಚು ಮಾಡುತ್ತಿದ್ದುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು ಎಂಬುದು ಕಂಡುಬಂದಿದೆ.
ಒಂದೆಡೆ ಹಣ ಹೂಡಿದವರ ಒತ್ತಡ, ಮತ್ತೊಂದೆಡೆ ಆದಾಯ ತೆರಿಗೆ ಹಾಗೂ ಇತರೆ ಏಜೆನ್ಸಿಗಳ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೆ ರಾಯ್ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಈ ಎಲ್ಲಾ ಒತ್ತಡಗಳು ಒಂದೇ ಬಾರಿಗೆ ರಾಯ್ ಅವರ ಜೀವನದಲ್ಲಿ ಆವರಿಸಿಕೊಂಡ ಪರಿಣಾಮ ಅದರಿಂದ ಹೊರಬರಲಾರದೆ ಆತ್ಮಹತ್ಯೆಯ ನಿರ್ಧಾರ ಮಾಡಿ ತಮ್ಮ ಪ್ರಾಣ ತ್ಯಜಿಸಿದರೇ ಎಂಬೆಲ್ಲಾ ಅಂಶಗಳು ವ್ಯಕ್ತವಾಗುತ್ತಿವೆ.
ರಾಯ್ ಅವರು ಮೇಲ್ನೋಟಕ್ಕೆ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ಕಂಡು ಬಂದಿದ್ದು, ಒಟ್ಟಾರೆ ರಾಯ್ ಅವರ ಆತ್ಮಹತ್ಯೆಗೆ ನಿಖರ ಕಾರಣವೇನೆಂಬುವುದರ ಬಗ್ಗೆ ಎಸ್ಐಟಿ ಪೊಲೀಸರು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿದುಬರಲಿದೆ.
ರಾಯ್ 3 ಗಂಟೆಗೇ ಸಾಯಲು ನಿರ್ಧರಿಸಿಕೊಂಡಿದ್ರಾ? ‘75’ರ ಹಿಂದಿನ ರಹಸ್ಯವೇನು?
ಕೊನೆಗೂ ಸಿಕ್ತು ಉದ್ಯಮಿ ಸಿಜೆ ರಾಯ್ ಡೆತ್ ನೋಟ್ ; ಸುಸೈಡ್ ನೋಟ್ ನಲ್ಲೇನಿದೆ?