ಬಾಗಲಕೋಟೆ: ಮೂರು ಮಕ್ಕಳನ್ನು ಸ್ವತಃ ತಾಯಿಯೇ ನೇಣು ಬಿಗಿದು ಕೊಲೆಗೈದು, ತಾನೂ ಆತ್ಮ*ಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆಯ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ
ರೂಪಾ ಹನುಮಂತಗೌಡರ (27) ಎಂಬುವವರೇ ಈ ಕೃತ್ಯ ಎಸಗಿದ ಗೃಹಿಣಿ. ಇವರು ತಮ್ಮ ಮೂರು ಮಕ್ಕಳಾದ ಸಮೃದ್ಧಿ (5), ಪ್ರೀತಮ್ (4) ಮತ್ತು ಸುಕ್ಷಿತ್ (2) ಅವರನ್ನು ಮನೆಯ ಜಂತಿಗೆ ನೇಣು ಹಾಕಿ ಕೊಲೆ ಮಾಡಿದ್ದಾರೆ. ಮಕ್ಕಳ ಪ್ರಾಣ ಹೋದ ನಂತರ ತಾನೂ ಸಾಯಬೇಕೆಂಬ ನಿರ್ಧಾರದಿಂದ ರೂಪಾ ಅವರು ಡೀಸೆಲ್ ಕುಡಿದು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ರೂಪಾ ಪ್ರಾಣಾಪಾಯದಿಂದ ಪಾರಾಗಿದ್ದು, ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಮೂವರು ಮುಗ್ಧ ಮಕ್ಕಳು ಪ್ರಾಣ ಕಳೆದುಕೊಂಡಿರುವುದು ನೋಡುಗರ ಎದೆಯನ್ನೇ ನಡುಗಿಸುವಂತಿದೆ.
ಅತ್ತೆಯ ಕಿರುಕುಳವೇ ಕಾರಣ?
ಪ್ರಾಥಮಿಕ ಮಾಹಿತಿಯ ಪ್ರಕಾರ, ಅತ್ತೆ ರೇಣವ್ವ ಅವರ ಕಿರುಕುಳವೇ ಈ ದುರಂತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. 2018ರ ಡಿಸೆಂಬರ್ 10ರಂದು ಹನುಮಂತ ಗೌಡರ ಜೊತೆ ರೂಪಾ ಅವರ ವಿವಾಹವಾಗಿತ್ತು. ಹನುಮಂತ ಅವರು ಬಾದಾಮಿಯ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಸಂಸಾರ ಸಾಗಿಸುತ್ತಿದ್ದರು. ಆದರೆ, ಮದುವೆಯಾದಾಗಿನಿಂದಲೂ ಅತ್ತೆ ರೇಣವ್ವ ಮತ್ತು ಸೊಸೆ ರೂಪಾ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಈ ಜಗಳ ಮಿತಿಮೀರಿತ್ತು. ಅತ್ತೆಯ ನಿತ್ಯದ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತ ರೂಪಾ, ಜೀವನದಲ್ಲಿ ಜಿಗುಪ್ಸೆಗೊಂಡು ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆ ನಡೆದ ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ರೂಪಾ ಅವರ ಹೇಳಿಕೆಯನ್ನು ಆಧರಿಸಿ ಹಾಗೂ ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಸಂಪೂರ್ಣವಾಗಿ ಹೊರಬರಬೇಕಿದೆ.