Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ರಾಜ್ಯಸಭಾ ಕಾಂಗ್ರೆಸ್ ಸಂಸದ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ, ಹಂಚಿಕೊಂಡ ಒಂದು ಹಳೆಯ ಫೋಟೋ, ಬಿಜೆಪಿ, ಆರ್ಎಸ್ಎಸ್ ಮತ್ತು ಕಾಂಗ್ರೆಸ್ ಒಳರಾಜಕೀಯ ಕುರಿತು ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ದಿಗ್ವಿಜಯ ಸಿಂಗ್ ಅವರು Quora ದಲ್ಲಿ ಪೋಸ್ಟ್ ಮಾಡಿರುವ ಚಿತ್ರದಲ್ಲಿ, ನರೇಂದ್ರ ಮೋದಿಯವರು, ಸಾಮಾನ್ಯ ಕಾರ್ಯಕರ್ತನಂತೆ ತಮ್ಮ ನಾಯಕ ಎಲ್.ಕೆ. ಅಡ್ವಾಣಿಯವರ ಬಳಿ ಕೆಳಗೆ ಕುಳಿತಿದ್ದಾರೆ. ಇದನ್ನ ಪೋಸ್ಟ್ ಮಾಡಿರುವ ಸಿಂಗ್, “ಒಬ್ಬ ತಳಮಟ್ಟದ ಆರ್ಎಸ್ಎಸ್ ಸ್ವಯಂಸೇವಕ ಮತ್ತು ಜನಸಂಘ/ಬಿಜೆಪಿ ಕಾರ್ಯಕರ್ತ ತನ್ನ ನಾಯಕರ ಪಾದಗಳ ಕೆಳಗೆ ಕುಳಿತುಕೊಳ್ಳುವುದರಿಂದ ನಿರಂತರ ಪರಿಶ್ರಮದ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ನಂತರ ದೇಶದ ಪ್ರಧಾನಿಯಾಗುವವರೆಗೆ ಹೇಗೆ ಬೆಳೆಯಬಹುದು ಎಂಬುದನ್ನು ಈ ಫೋಟೋ ಸ್ಪಷ್ಟವಾಗಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನು ಸಂಘಟನೆಯ ಶಕ್ತಿಯ ಜೀವಂತ ಉದಾಹರಣೆ ಎಂದು ಬಣ್ಣಿಸಿದ ದಿಗ್ವಿಜಯ್ ಸಿಂಗ್, ಯಾವುದೇ ರಾಜಕೀಯ ಪಕ್ಷದ ನಿಜವಾದ ಶಕ್ತಿ ಅದರ ಕಾರ್ಯಕರ್ತರು ಮತ್ತು ಬಲವಾದ ಸಂಘಟನೆಯಿಂದ ಬರುತ್ತದೆ ಎನ್ನುವುದರೊಂದಿಗೆ “ಜೈ ಸಿಯಾ ರಾಮ್” ಎಂದು ತಮ್ಮ ಪೋಸ್ಟ್ ಅನ್ನು ಮುಗಿಸಿದ್ದಾರೆ.
ರಾಹುಲ್ ಗಾಂಧಿಗೆ ಪರೋಕ್ಷ ಪಾಠ..?
ದಿಗ್ವಿಜಯ್ ಸಿಂಗ್ ತಮ್ಮ ಮತ್ತೊಂದು ಪೋಸ್ಟ್ನಲ್ಲಿ ರಾಹುಲ್ ಗಾಂಧಿಯನ್ನು ಟ್ಯಾಗ್ ಮಾಡಿ, ಕಾಂಗ್ರೆಸ್ ಪಕ್ಷದೊಳಗಿನ ಸಂಘಟನಾ ಸುಧಾರಣೆಗಳ ಅಗತ್ಯವನ್ನು ಪ್ರಸ್ತಾಪಿಸಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ವಿಷಯಗಳ ಕುರಿತು ರಾಹುಲ್ ಗಾಂಧಿಯ ತಿಳುವಳಿಕೆಯನ್ನು ಮೆಚ್ಚಿಕೊಂಡಿದ್ದಾರೆ.
ಮುಂದುವರೆದು, ಚುನಾವಣಾ ಆಯೋಗಕ್ಕೆ ಸುಧಾರಣೆಯ ಅಗತ್ಯವಿರುವಂತೆ, ಕಾಂಗ್ರೆಸ್ ಪಕ್ಷಕ್ಕೂ ರಚನಾತ್ಮಕ ಬದಲಾವಣೆಗಳ ಅಗತ್ಯವಿದೆ ಎಂದು ದಿಗ್ವಿಜಯ ಸಿಂಗ್, ಪಕ್ಷದ ಸಂಘಟನೆಯನ್ನು ಬಲಪಡಿಸುವತ್ತ ಇನ್ನಷ್ಟು ಗಮನ ಹರಿಸಬೇಕೆಂದು ಸಲಹೆ ನೀಡಿದ್ದಾರೆ. ಇದೇ ವೇಳೆ, ನಾಯಕತ್ವ ಮಾತ್ರವಲ್ಲದೆ, ಬಲವಾದ ಸಂಘಟನಾ ವ್ಯವಸ್ಥೆಯೇ ಚುನಾವಣಾ ಯಶಸ್ಸಿಗೆ ಪ್ರಮುಖ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.