Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಬೆಂಗಳೂರಿನ ಮಡಿವಾಳದ ಗ್ರ್ಯಾಂಡ್ ಚಾಯ್ಸ್ ಲಾಡ್ಜ್ ನಲ್ಲಿ ಕಳೆದ 8 ದಿನಗಳಿಂದ ಪ್ರೇಯಸಿ ಜೊತೆ ತಂಗಿದ್ದ ಯುವಕನೋರ್ವ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಪುತ್ತೂರು ಮೂಲದ 20 ವರ್ಷದ ತಕ್ಷಿತ್ ವಿರಾಜಪೇಟೆಯ ರಕ್ಷಿತಾ ಎನ್ನುವ ಯುವತಿ ಜೊತೆ ಲಾಡ್ಜ್ನಲ್ಲಿ ರೂಂ ಮಾಡಿಕೊಂಡಿದ್ದರು. ಆದರೆ ತಕ್ಷಿತ್ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಇನ್ನು ತಕ್ಷಿತ್ ಸಾವಿಗೂ ಮುನ್ನ ಆತನ ಜೊತೆಗಿದ್ದ ಯುವತಿ ಲಾಡ್ಜ್ನಿಂದ ಹೊರಹೋಗಿದ್ದಳು.
ಇದೀಗ ಪ್ರಕರಣ ಹೊಸ ತಿರುವು ಪಡೆದಿದೆ. ಮರಣೋತ್ತರ ಪರೀಕ್ಷೆಯ ವರದಿ ಮಡಿವಾಳ ಠಾಣೆಯ ಪೊಲೀಸರ ಕೈ ಸೇರಿದೆ.ತಕ್ಷಿತ್ ಮತ್ತು ಯುವತಿ ಸುಮಾರು 20 ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದರು. ಪದೇ ಪದೇ ಲಾಡ್ಜ್ ಬದಲಾಯಿಸಿದ್ದರು. 8 ದಿನಗಳ ಹಿಂದೆ ಗ್ರ್ಯಾಂಡ್ ಚಾಯ್ಸ್ ಹೋಟೆಲ್ಗೆ ಬಂದಿದ್ದ ಇಬ್ಬರು ಎರಡು ಪ್ರತ್ಯೇಕ ಕೋಣೆಗಳನ್ನು ಪಡೆದುಕೊಂಡಿದ್ದರು. ಇದೀಗ ಮರಣೋತ್ತರ ಶವ ಪರೀಕ್ಷೆಯ ವರದಿ ಪ್ರಕರಣಕ್ಕೆ ಹೊಸ ಆಯಾಮ ನೀಡುತ್ತಾ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿವೆ.
ಲಾಡ್ಜ್ನಲ್ಲಿಯೇ ಉಳಿದುಕೊಂಡಿದ್ದ ತಕ್ಷಿತ್ ಮತ್ತು ಅಕ್ಟೋಬರ್ 17ರಂದು ಆನ್ಲೈನ್ ಮೂಲಕ ಫುಡ್ ತರಿಸಿಕೊಂಡಿದ್ದರು. ಈ ಆಹಾರ ಸೇವನೆ ಬಳಿಕ ಇಬ್ಬರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಕೆಲವೊಂದು ಮಾತ್ರೆಗಳನ್ನು ತೆಗೆದುಕೊಂಡಿದ್ದರು. ನಂತರ ಯುವತಿ ರೂಮ್ ಚೆಕ್ಔಟ್ ಮಾಡಿ ಬೆಂಗಳೂರಿನಿಂದ ಊರಿಗೆ ತೆರಳಿದ್ದಳು. ಇತ್ತ ತಕ್ಷಿತ್ ಸಹ ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದನು.
ಪೋಸ್ಟ್ ಮಾರ್ಟ್ಂ ವರದಿಯಲ್ಲಿ ತಕ್ಷಿತ್ ಸಾವಿಗೆ ಕಿಡ್ನಿ ವೈಫಲ್ಯ ಎಂಬ ಮಾಹಿತಿ ಇದೆ ಎಂದು ತಿಳಿದು ಬಂದಿದೆ. ಲಿವರ್ ಸಮಸ್ಯೆ ಹಾಗೂ ಅಸ್ತಮಾ ಕಾಯಿಲೆಯಿಂದ ತಕ್ಷಿತ್ ಬಳಲುತ್ತಿದ್ದ ಎಂಬುದರ ಬಗ್ಗೆಯೂ ತಿಳಿದು ಬಂದಿದೆ. ದಿಢೀರ್ ಕಿಡ್ನಿ ವೈಫಲ್ಯಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಪೊಲೀಸರು ಎರಡು ದಿನಗಳಿಂದ ಯುವತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.