newsics.com
ವಿಜಯಪುರ: ಜಿಲ್ಲೆಯ ಭೀಮಾತೀರದ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದ್ದು, ಗ್ರಾಪಂ ಅಧ್ಯಕ್ಷ ದಾರುಣ ಸಾವಿಗೀಡಾಗಿದ್ದಾರೆ.
ದೇವರನಿಂಬರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮನಗೌಡ ಬಿರಾದಾರ ಮೇಲೆ, ದುಷ್ಕರ್ಮಿಗಳು
ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಭೀಮನಗೌಡ ಬಿರಾದಾರ ತಲೆ ಹಾಗೂ ಎದೆಗೆ ಗುಂಡುಗಳು ತಗಲಿದ್ದು, ಹಳೇ ವೈಷಮ್ಯದ ಹಿನ್ನೆಲೆ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ನು ಭೀಮನಗೌಡ ಬಿರಾದಾರ ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಪರಮಾಪ್ತರಾಗಿದ್ದು, ಮೂವರಿಂದ ನಾಲ್ವರು ಮುಸುಕುಧಾರಿಗಳಿಂದ ಕೃತ್ಯ ನಡೆದಿದೆ.
ದೇವರನಿಂಬರಗಿ ಗ್ರಾಮದ ಹೇರ್ ಕಟಿಂಗ್ ಶಾಪ್ನಲ್ಲಿ ಹೇರ್ ಕಟ್ ಮಾಡಿಸಿಕೊಳ್ಳಲು ಭೀಮನಗೌಡ ಬಿರಾದಾರ ಬಂದಿದ್ದರು. ಈ ವೇಳೆ ಕಟಿಂಗ್ ಮಾಡುವವನ ಕಣ್ಣಿಗೆ ಖಾರದ ಪುಡಿ ಎರಚಿ ಕೃತ್ಯ ಎಸಗಲಾಗಿದೆ. ಭೀಮನಗೌಡ ದೇಹವನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.