newsics.com
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿ ಶುಕ್ರವಾರ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದರಾದರೂ ಚುನಾವಣಾ ಆಯೋಗಕ್ಕೆ ದೂರು ಕೊಡದೆ ಹಿಂತಿರುಗಿದ್ದಾರೆ.
ಗುರುವಾರ (ಆ.7) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಂಕಿ–ಸಂಖ್ಯೆ ಸಮೇತ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಇಷ್ಟಕ್ಕೆ ಸುಮ್ಮನಿರದ ರಾಹುಲ್ ಶುಕ್ರವಾರ ಬೆಂಗಳೂರಿಗೆ ಬಂದು ಚುನಾವಣೆ ಆಯೋಗ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ನೇರವಾಗಿ ಆರೋಪಿಸಿದರು. ಆದರೆ, ಮತಗಳ್ಳತನ ವಿರುದ್ಧ ಕರ್ನಾಟಕ ಚುನಾವಣೆ ಆಯೋಗಕ್ಕೆ ದೂರು ನೀಡದೇ ರಾಹುಲ್ ಗಾಂಧಿ ಹಾಗೇ ದೆಹಲಿಗೆ ಹಾರಿದ್ದಾರೆ.
ಹೀಗಾಗಿ ಮೌಖಿಕ ಆರೋಪ ಮಾಡಿ ದೂರು ನೀಡದೇ ಹೋಗಿದ್ಯಾಕೆ ಎನ್ನುವ ಚರ್ಚೆಗಳು ಶುರುವಾಗಿವೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟದಲ್ಲಿ ರಾಹುಲ್ ಗಾಂಧಿ, ಕೇಂದ್ರದ ಚುನಾವಣಾ ಆಯೋಗದ ವಿರುದ್ಧ ಗುಡುಗಿದರು. ಮಹದೇವಪುರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಮತ್ತೊಮ್ಮೆ ಸಂವಿಧಾನ ಪುಸ್ತಕ ಹಿಡಿದು ವಾಗ್ದಾಳಿ ನಡೆಸಿದರು. ಮಹದೇವಪುರ ಕ್ಷೇತ್ರದಲ್ಲಿ 5 ವಿಧಗಳಲ್ಲಿ ಮತ ಕಳ್ಳತನವಾಗಿದೆ ಎಂದು ಪುನರುಚ್ಛರಿಸಿರು.
ಹೀಗೆ ಗಂಭೀರ ಆರೋಪ ಮಾಡಿರುವ ರಾಹುಲ್ ಗಾಂಧಿ, ಪ್ರತಿಭಟನಾ ಸಮಾವೇಶ ಮುಗಿಯುತ್ತಿದ್ದಂತೆಯೇ ಕರ್ನಾಟಕ ಚುನಾವಣಾ ಆಯೋಗಕ್ಕೆ ದೂರು ನೀಡಲು ಹೋಗಲಿಲ್ಲ. ಬದಲಿಗೆ ಖಾಸಗಿ ಹೋಟೆಲ್ ಹಾಗೂ ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿ ಭೋಜನ ಸವಿದು ದೆಹಲಿಗೆ ಹಾರಿದ್ದಾರೆ.
ಫ್ರೀಡಂಪಾರ್ಕ್ ನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಈ ಕಾರ್ಯಕ್ರಮ ಮುಗಿದ ಬಳಿಕ ಚುನಾವಣಾ ಆಯೋಗ ಕಚೇರಿಗೆ ತೆರಳಿ ದೂರು ನೀಡುತ್ತೇವೆ ಎಂದಿದ್ದರು. ಆದರೆ ಯಾವುದೇ ದೂರು ನೀಡದೆ ರಾಹುಲ್ ಗಾಂಧಿ ತಾಜ್ ವೆಸ್ಟೆಂಡ್ ಹೋಟೆಲ್ಗೆ ತೆರಳಿ ಬಳಿಕ ಅಲ್ಲಿಂದ ಖರ್ಗೆ ನಿವಾಸಕ್ಕೆ ತೆರಳಿ ಅಲ್ಲಿಂದ HLA ಏರ್ಪೋರ್ಟ್ನಿಂದ ದೆಹಲಿಗೆ ಹಾರಿದ್ದಾರೆ.
ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿರುವ ಚುನಾವಣೆ ಆಯೋಗ, ಮತಗಳ್ಳತನ ಆರೋಪಕ್ಕೆ ಸಾಕ್ಷ್ಯ ನೀಡಿ ತನಿಖೆ ಮಾಡುತ್ತೇವೆ ಎಂದಿದೆ. ಡಿಕ್ಲರೇಷನ್ ಗೆ ಸಹಿ ಹಾಕುವಂತೆ ರಾಹುಲ್ ಗಾಂಧಿಗೆ ತಾಕೀತು ಮಾಡಿದೆ. ಇಲ್ಲದಿದ್ರೆ ಕ್ಷಮೆ ಕೇಳಿ ಎಂದು ಆಯೋಗ ಹೇಳಿದೆ. ಇನ್ನು ಡಿಕ್ಲರೇಷನ್ಗೆ ಸಹಿ ಹಾಕಿದರೆ ಮುಂದೆ ಕಾನೂನಾತ್ಮಕ ಸಮಸ್ಯೆ ಸಾಧ್ಯತೆ ಇದೆ. ಕಾನೂನಿಗೆ ಹೆದರಿ ದೂರು ನೀಡಲು ರಾಹುಲ್ ಗಾಂಧಿ ಹಿಂದೇಟು ಹಾಕಿದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ನಿನ್ನೆಯೇ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ರಾಜ್ಯ ಚುನಾವಣಾ ಮುಖ್ಯ ಆಯುಕ್ತ ಅನ್ಬುಕುಮಾರ್, ಡಿಕ್ಲೆರೇಷನ್ ಗೆ ಸಹಿ ಹಾಕಿ ದಾಖಲೆಗಳನ್ನು ನೀಡುವಂತೆ ಸೂಚಿಸಿದ್ದರು.
ಡಿಕ್ಲರೇಷನ್ಗೆ ಸಹಿ ಹಾಕಿದರೆ ಮುಂದೆ ಕಾನೂನಾತ್ಮಕ ಸಮಸ್ಯೆಯಾಗಲಿದೆ. ಚುನಾವಣಾ ಪಟ್ಟಿ ತಿದ್ದುಪಡಿ, ಸಿದ್ದತೆ ಅಥವಾ ಶುದ್ಧೀಕರಣ ಸಂಬಂಧ ನೀಡುವ ತಪ್ಪು ಘೋಷಣೆ ಶಿಕ್ಷಾರ್ಹವಾಗಿದೆ. 1950ರ ಪ್ರಜಾಪ್ರಭುತ್ವ ಪ್ರತಿನಿಧಿ ಕಾಯ್ದೆ ಕಲಂ 31ರಂತೆ ಗರಿಷ್ಠ ಒಂದು ವರ್ಷದವರೆಗೆ ಜೈಲುಶಿಕ್ಷೆ ವಿಧಿಸಬಹುದು. ದಂಡ ಅಥವಾ ಎರಡೂ ವಿಧಿಸಬಹುದು ಎಂದು ಅರಿತಿದ್ದೇನೆ ಎಂದು ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು.
ನ್ಯಾಯಾಲಯ ಅಥವಾ ಅಧಿಕೃತ ದಾಖಲೆಗಳಲ್ಲಿ ಸುಳ್ಳು ಸಾಕ್ಷ್ಯ ಅಥವಾ ಪ್ರಮಾಣಪತ್ರ ನೀಡುವುದು 2023ರ ಕಲಂ 227ರಂತೆ ಶಿಕ್ಷಾರ್ಹವಾಗಿದೆ. ಇದಕ್ಕೆ ಹೆಚ್ಚು ಕಠಿಣ ಶಿಕ್ಷೆಗಳನ್ನು ವಿಧಿಸಲಾಗುತ್ತದೆ.
ಇಷ್ಟೆಲ್ಲಾ ಕಾನೂನು ಸಮಸ್ಯೆ ಇರುವ ಕಾರಣ ಮತಗಳ್ಳತನ ಆರೋಪ ಮಾಡಿರುವ ರಾಹುಲ್ ಗಾಂಧಿ ದೂರು ಸಲ್ಲಿಕೆ ವೇಳೆ ಘೋಷಣಾ ಪತ್ರಕ್ಕೆ ಸಹಿ ಹಾಕ್ತಾರಾ? ಇಲ್ಲವಾ ಎನ್ನುವುದು ಕುತೂಹಲ ಮೂಡಿಸಿದೆ.
Viral video ರೀಲ್ಸ್ಗಾಗಿ ಚಲಿಸುತ್ತಿದ್ದ ಥಾರ್ ಟಾಪ್ ಏರಿ ಯುವತಿ ಹುಚ್ಚಾಟ! ವೈರಲ್ ವಿಡಿಯೋ ನೋಡಿ