newsics.com
ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಆರೋಪ ಪ್ರಕರಣದ ಸಂಬಂಧ ಎಸ್ಐಟಿ ಶೋಧಕಾರ್ಯ ಮುಂದುವರಿಸಿದ್ದು, ಸೋಮವಾರ ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಮೃತದೇಹದ ಅವಶೇಷಗಳು ಪತ್ತೆಯಾಗಿವೆ.
ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 11ನೇ ಜಾಗಕ್ಕಿಂತ ಸುಮಾರು 100 ಮೀಟರ್ ದೂರದಲ್ಲಿ ನೆಲದ ಮೇಲೆ ಅವಶೇಷಗಳು ಸಿಕ್ಕಿವೆ. ಆ ಜಾಗವನ್ನೂ ಆತನೇ ತೋರಿಸಿದ್ದ.
ಒಂದು ತಲೆಬುರುಡೆ, ಬೆನ್ನು ಮೂಳೆ ಸೇರಿ ಸುಮಾರು 100 ಮೂಳೆ ಸಿಕ್ಕಿವೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
‘ಉದ್ದನೆಯ ಬೆನ್ನುಮೂಳೆಯೂ ಸ್ಥಳದಲ್ಲಿತ್ತು. ತಜ್ಞರ ತಂಡವು ಅದನ್ನು ವೈಜ್ಞಾನಿಕವಾಗಿ ಸಂಗ್ರಹ ಮಾಡಿದೆ. ಈ ಸ್ಥಳದಲ್ಲೇ ಗಂಟು ಹಾಕಿರುವ ಸೀರೆ ಸಹ ಸಿಕ್ಕಿದೆ’ ಎಂದು ಎಸ್ಐಟಿ ಮೂಲಗಳು ಹೇಳಿವೆ.
ಎಸ್ಐಟಿಯವರು ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಕಾಡು ಪ್ರವೇಶಿಸಿದ್ದರು. ಇಷ್ಟುದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಊಟದ ವಿರಾಮ ನೀಡಲಾಗುತ್ತಿತ್ತು. ಸೋಮವಾರ ಊಟದ ವಿರಾಮವಿಲ್ಲದೆ ಶೋಧ ಮುಂದುವರಿಯಿತು. ಎಸ್ಐಟಿಯವರು ಕಾಡಿನಿಂದ ಹೊರಗೆ ಬರುವಾಗ ಸಂಜೆ 6.15 ದಾಟಿತ್ತು.
ಸಾಕ್ಷಿ ದೂರುದಾರ ಧರ್ಮಸ್ಥಳದ ಸ್ನಾನಘಟ್ಟದ ಆಸುಪಾಸಿನಲ್ಲಿ 13 ಜಾಗ ತೋರಿಸಿ, ಅಲ್ಲಿ ಶವಗಳನ್ನು ಹೂತಿದ್ದಾಗಿ ತಿಳಿಸಿದ್ದ. ಆತ ತೋರಿಸಿದ್ದ 10 ಜಾಗಗಳನ್ನು ಇಷ್ಟು ದಿನ ಸರದಿಯಂತೆ ಅಗೆಯಲಾಗಿತ್ತು. ಅದರ ಅನ್ವಯ ದೂರುದಾರ ತೋರಿಸಿರುವ 11ನೇ ಜಾಗವನ್ನು ಸೋಮವಾರ ಅಗೆಯಬೇಕಿತ್ತು.
ಅಧಿಕಾರಿಗಳ ತಂಡ ಕಾಡಿನೊಳಗೆ ಪ್ರವೇಶಿಸಿದ ಸ್ವಲ್ಪ ಹೊತ್ತಿನಲ್ಲೆ ಎರಡು ಚೀಲ ಉಪ್ಪು ಒಯ್ದಲಾಯಿತು. ಕಮಾಂಡೊ ಪಡೆಯ ನಾಲ್ವರು ಭದ್ರತಾ ಸಿಬ್ಬಂದಿಯನ್ನು ಎಸ್ಐಟಿ ಅಧಿಕಾರಿಗಳು ಮೃತದೇಹದ ಅವಶೇಷ ಪತ್ತೆಯಾದ ಸ್ಥಳಕ್ಕೆ ಕರೆಸಿಕೊಂಡರು.
ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದರು. ಆರನೇ ಜಾಗದಲ್ಲಿ ಗಂಡಸಿನ ಮೃತದೇಹದ ಅವಶೇಷ ಗುರುವಾರ ಪತ್ತೆಯಾಗಿತ್ತು. ಉಳಿದ ಒಂಬತ್ತು ಜಾಗಗಳಲ್ಲಿ ಮೃತದೇಹಗಳನ್ನು ಹೂತ ಯಾವುದೇ ಕುರುಹು ಸಿಕ್ಕಿರಲಿಲ್ಲ.