newsics.com
ಸಂಸ್ಕೃತ ಭಾರತದ ಪ್ರಾಚೀನ ಭಾಷೆ. ಸಾವಿರಾರು ವರ್ಷಗಳಿಂದ ಇಂದಿಗೂ ಅಳಿಯದೇ ತನ್ನದೇ ಅಸ್ತಿತ್ವ ಉಳಿಸಿಕೊಂಡು ಬಂದಿರುವ ಭಾಷೆಯಿದು. ಒಂದು ಸಂಶೋಧನೆಗಳ ಪ್ರಕಾರ ಕಳೆದ ನೂರು ವರ್ಷಗಳಲ್ಲಿ ಜಗತ್ತಿನ ಒಟ್ಟು ಸುಮಾರು 2 ಸಾವಿರಕ್ಕೂ ಅಧಿಕ ಭಾಷೆಗಳು ನಾಶವಾಗಿ ಹೋಗಿವೆ. ಅವುಗಳ ಕುರುಹುಗಳು ಕೂಡ ಇಲ್ಲ. ಆದ್ರೆ ಈ ಭಾರತದ ದೇಶದ ಮೂಲ ಭಾಷೆಯಾಗಿರುವ ಸಂಸ್ಕೃತ ಸುಮಾರು 2 ಸಾವಿರ ವರ್ಷಗಳಿಂದಲೂ ಉಳಿದುಕೊಂಡು ಬಂದಿದೆ.
ಸದ್ಯ ಇದನ್ನು ಅಳಿವಿನಂಚಿನಲ್ಲಿರುವ ಭಾಷೆ ಎಂದು ಕರೆಯುತ್ತಾರೆ ಆದರೂ ಕೂಡ, ಅದಕ್ಕಿರುವ ಘನತೆಗೆ ಇಂದಿಗೂ ಕೂಡ ಧಕ್ಕೆ ಬಂದಿಲ್ಲ. ಕಾರಣ ಇದನ್ನು ದೇವ ಭಾಷೆ ಎಂದು ಕರೆಯುತ್ತಾರೆ. ಸಂಸ್ಕೃರಿಸಿದ ಭಾಷೆಯೇ ಸಂಸ್ಕೃತವಾಗಿದ್ದು ಅಂತಲೂ ಹೇಳುತ್ತಾರೆ. ಆದ್ರೆ ಭಾರತದ ದೇವ ಭಾಷೆಯಾದ ಇದನ್ನು ಸದ್ಯ ಯಾರೂ ಆಡು ಭಾಷೆಯನ್ನಾಗಿಸಿಕೊಂಡಿಲ್ಲ ಎಂಬ ಕಲ್ಪನೆ ನಿಮಗಿದ್ದರೆ ಅದು ತಪ್ಪು. ಭಾರತದಲ್ಲಿ ಸುಮಾರು ಐದು ಹಳ್ಳಿಗಳಲ್ಲಿ ಇಂದಿಗೂ ಕೂಡ ಸಂಸ್ಕೃತ ಆಡು ಭಾಷೆಯಾಗಿ ಉಳಿದುಕೊಂಡು ಬಂದಿದೆ.
ಅಂತಹ ಎರಡು ಹಳ್ಳಿಗಳು ಕರ್ನಾಟಕದಲ್ಲಿಯೂ ಕೂಡ ಇವೆ. ಶಿವಮೊಗ್ಗ ಜಿಲ್ಲೆಯ ಮತ್ತೂರು ಎಂಬ ಗ್ರಾಮದಲ್ಲಿ ಇಂದಿಗೂ ಕೂಡ ಸಂಸ್ಕೃತ ಇಲ್ಲಿನ ಆಡು ಭಾಷೆ. ಇಲ್ಲಿಯ ಪ್ರತಿಯೊಬ್ಬ ಜನರು ಯಾವದೇ ಭೇದಗಳಿಲ್ಲದೇ ಸಂಸ್ಕೃತವನ್ನು ಮಾತನಾಡುತ್ತಾರೆ. ಈ ಗ್ರಾಮದ ಶಾಲೆ ಸದ್ಯ ಅಳಿವನಂಚಿನಲ್ಲಿದೆ ಎಂದು ಭಾವಿಸಲಾಗಿರುವ ಸಂಸ್ಕೃತವನ್ನು ಗ್ರಾಮದ ಸುಮಾರು 5 ಸಾವಿರ ಜನರಿಗೆ ಕಲಿಸಲಾಗಿದೆ.
ಕರ್ನಾಟಕದ ರಾಜ್ಯದಾದ್ಯಂತ ಕನ್ನಡವೇ ಆಡು ಭಾಷೆಯಾಗಿದ್ದರು ಕೂಡ ಈ ಹಳ್ಳಿಯ ಜನರು ನಿತ್ಯ ಸಂಸ್ಕೃತವನ್ನೇ ಮಾತನಾಡುತ್ತಾರೆ. ಅದು ಕೂಡ ನಿರರ್ಗಳವಾಗಿ. ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತವನ್ನು ಆಡುಭಾಷೆಯನ್ನಾಗಿಸಿಕೊಂಡಿರುವ ಮತ್ತೊಂದು ಹಳ್ಳಿ ಅಂದ್ರೆ ಅದು ಮತ್ತೂರಿನ ಅವಳಿ ಗ್ರಾಮ ಎಂದು ಕರೆಸಿಕೊಳ್ಳುವ ಹೊಸಹಳ್ಳಿ.ತುಂಗಭದ್ರಾ ನದಿ ದಂಡೆಯಲ್ಲಿರುವ ಈ ಪುಟ್ಟ ಹಳ್ಳಿಯ ಜನ ಇಂದಿಗೂ ಕೂಡ ಸಂಸ್ಕೃವನ್ನು ಮಾತನಾಡುತ್ತಾರೆ. 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣದೇವರಾಯ ಸ್ವತಃ ತಾನೇ ಅಧಿಕಾರವಹಿಸಿಕೊಂಡು ಈ ಎರಡು ಹಳ್ಳಿಗಳಲ್ಲಿ ಅಂದ್ರೆ ಮಟ್ಟೂರು ಮತ್ತು ಹೊಸಹಳ್ಳಿಯಲ್ಲಿ ಸಂಸ್ಕೃತ ಭಾಷೆಯ ಪೋಷಣೆಯಾಗಗಬೇಕು ಎಂದು ಹೇಳಿದ್ದ. ಅದರಂತೆ ಸಂಸ್ಕೃತವನ್ನು ತಮ್ಮ ಭಾಷೆಯನ್ನಾಗಿ ಅಳವಡಿಸಿಕೊಂಡ ಈ ಎರಡು ಗ್ರಾಮಗಳು ಸದ್ಯ ಜಾಗತಿಕವಾಗಿ ಗುರುತಿಸಿಕೊಂಡಿವೆ. ಹೊರ ದೇಶಗಳಿಂದ ಅದೆಷ್ಟೋ ಜನರು ಸಂಸ್ಕೃತ ಕಲಿಯಲೆಂದೇ ಈ ಗ್ರಾಮಗಳಿಗೆ ಬರುತ್ತಾರೆ.
ಮಧ್ಯಪ್ರದೇಶದ ರಾಜಘರ್ ಜಿಲ್ಲೆಯಿಂದ 45 ಕಿಲೋ ಮೀಟರ್ ದೂರದಲ್ಲಿರುವ ಈ ಜ್ಹಿರಿ ಎಂಬ ಹಳ್ಳಿಯಲ್ಲಿ ಸಂಸ್ಕೃತ ಸಂಪೂರ್ಣವಾಗಿ ಆವರಿಸಿಕೊಂಡಿದೆ. ಸುಮಾರು 10 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಈ ಗ್ರಾಮದ ಆಡು ಭಾಷೆ ಸಂಸ್ಕೃತ. ಇಲ್ಲಿರುವ ಪ್ರತಿಯೊಬ್ಬರು ಕೂಡ ಸಂಸ್ಕೃತ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಪ್ರಾಚೀನ ಕಾಲದಿಂದಲೂ ಹಿರಿಯರು ತಮ್ಮ ಪುಟ್ಟ ಮಕ್ಕಳಿಗೆ ದೇವಾಲಯಗಳಲ್ಲಿ ಕೂರಿಸಿಕೊಂಡು ಜಾತಿ ಭೇದವೆನ್ನದೇ ಸಂಸ್ಕೃತ ಕಲಿಸಿಕೊಡುವ ಪದ್ಧತಿಯನ್ನು ಜಾರಿಯಲ್ಲಿಟ್ಟು ಹೋದರು. ಅದು ಈಗ ಒಂದು ಸಂದರ ಗ್ರಾಮದ ಸೃಷ್ಟಿಗೆ ಸಾಕ್ಷಿಯಾಗಿ ನಿಂತಿದೆ. ಇಲ್ಲಿನ ಯಾವುದೇ ಮದುವೆಯಿರಲಿ ಅಲ್ಲಿ ಮಹಿಳೆಯರು ಒಂದು ಸಂಸ್ಕೃತ ಗೀತೆ ಹಾಡದೇ ಅದು ಪೂರ್ಣವಾಗುವುದೇ ಇಲ್ಲ. ಈ ಒಂದು ಗ್ರಾಮ ಪ್ರವಾಸಿಗರು ಭೇಟಿ ಕೊಡುವ ಅತ್ಯಂತ ನೆಚ್ಚಿನ ಗ್ರಾಮವಾಗಿ ಮಧ್ಯಪ್ರದೇಶದಲ್ಲಿ ಗುರುತಿಸಿಕೊಂಡಿದೆ.
ಒಡಿಶಾದಲ್ಲಿರುವ ಸಾಸನಾ ಗ್ರಾಮ ಹೆಚ್ಚು ಬ್ರಾಹ್ಮಣ ಮನೆತನಗಳಿಂದಲೇ ತುಂಬಿದೆ. 50 ಮನೆಗಳನ್ನು ಹೊಂದಿರುವ ಈ ಊರಿನಲ್ಲಿ ಸುಮಾರು 300 ಜನರು ವಾಸಿಸುತ್ತಾರೆ. ಇಲ್ಲಿ ಸಂಸ್ಕೃತ ಕಲಿಯುವ ಅಭ್ಯಾಸ ಒಂದು ಪರಂಪರೆಯಾಗಿಯೇ ಗುರುತಿಸಿಕೊಂಡು ಬಂದಿದೆ. ಅದು ಮಾತ್ರವಲ್ಲ ಇದರ ಪಕ್ಕದ ಗ್ರಾಮ ಬಬ್ಕಾಪುರ್ನ ಸಣ್ಣ ಮಂದಿರದಲ್ಲಿ ಕಾಳಿಸದಾಸನ ಕವಿತೆಗಳನ್ನು ಹಾಡುವುದರ ಮೂಲಕ ಕವಿರತ್ನನಿಗೆ ಗೌರವ ಸಲ್ಲಿಸುತ್ತಾರೆ. ಈ ಎರಡು ಗ್ರಾಮಗಳು ಸಂಸ್ಕೃತದ ಬಗ್ಗೆ ಒಂದೇ ಬಗೆಯಾದ ಭಕ್ತಿ ಹಾಗೂ ಗೌರವಗಳನ್ನು ಇಟ್ಟುಕೊಂಡಿವೆ.
ಬನ್ಸವಾರಾ ಜಿಲ್ಲೆಯಲ್ಲಿ ನೆಲೆಸಿರುವ ಗನೊಡಾ ಎಂಬ ಹಳ್ಳಿಯ ಸಂಸ್ಕೃತದ ನೆಲವೆಂದೇ ಕಳೆದ ಎರಡು ದಶಕಗಳಿಂದ ಖ್ಯಾತಿಯನ್ನು ಪಡೆದಿದೆ. ಎರಡು ದಶಕಗಳ ಹಿಂದೆ ಈ ಗ್ರಾಮದಲ್ಲಿ ಸ್ಥಳೀಯ ಆಡು ಭಾಷೆಯಾದ ವಾಗಡಿ ಭಾಷೆಯನ್ನೇ ಮಾತನಾಡುತ್ತಿದ್ದರು. ಶಾಲೆ ಮತ್ತು ಕಾಲೇಜುಗಳಲ್ಲಿ ಸಂಸ್ಕೃತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಲ್ಲಿ ಸಂಸ್ಕೃತವನ್ನು ಮಾತನಾಡಲು ಆರಂಭಿಸಿದರು. ತದನಂತರ ಇದು ಊರಿನ ಹಿರಿಯರಿಗೂ ಕೂಡ ಕಲಿಯುವ ಆಸಕ್ತಿಯನ್ನು ಹುಟ್ಟಿತು . ವಿದ್ಯಾರ್ಥಿಗಳಿಂದ ಹಿರಿಯರು ಕೂಡ ಸಂಸ್ಕೃತವನ್ನು ಕಲಿಯುವ ಮೂಲಕ ಇಡೀ ಹಳ್ಳಿಯೇ ಸಂಸ್ಕೃತಮಯವಾಗಿ ಹೋಯಿತು. ಕಳೆದ ಎರಡು ದಶಕಗಳಿಂದ ಇಲ್ಲಿಯ ಆಡು ಭಾಷೆ ಸಂಸ್ಕೃತವಾಗಿದೆ