newsics.com
ಉತ್ತರ ಪ್ರದೇಶ: ವಧುವಿನ ಕಡೆಯವರು ರೊಟ್ಟಿ ಬಡಿಸಲು ತಡ ಮಾಡಿದರೆಂಬ ಕಾರಣಕ್ಕೆ ವರನೊಬ್ಬ ಆಗಬೇಕಿದ್ದ ಮದುವೆಯನ್ನೇ ರದ್ದು ಮಾಡಿ, ಮರುದಿನ ಅತ್ತೆ ಮಗಳೊಂದಿಗೆ ಮದುವೆಯಾಗಿದ್ದಾನೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ವಧುವಿನ ಕಡೆಯವರು ರೊಟ್ಟಿ ಬಡಿಸಲು ವಿಳಂಬ ಮಾಡಿದರೆಂದು ಕೋಪಗೊಂಡ ವರ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾನೆ. ನಂತರ ಆತ ತನ್ನ ಅತ್ತೆ ಮಗಳನ್ನು ಮದುವೆಯಾಗಿದ್ದಾನೆ.
ವರದಿಗಳ ಪ್ರಕಾರ ಡಿಸೆಂಬರ್ 22 ರಂದು ಈ ಘಟನೆ ನಡೆದಿದ್ದು, ವರ ತನ್ನ ಸ್ನೇಹಿತರೊಂದಿಗೆ ಊಟಕ್ಕೆ ಕುಳಿತ ಸಂದರ್ಭದಲ್ಲಿ ಮದುಮಗನಿಗೆ ವಧುವಿನ ಕುಟುಂಬಸ್ಥರು ರೊಟ್ಟಿ ಬಡಿಸುವಾಗ ವಿಳಂಬ ಮಾಡಿದ್ದು, ಇದನ್ನು ಕಂಡು ಸ್ನೇಹಿತರು ಆತನನ್ನು ಗೇಲಿ ಮಾಡಿದ್ದಾರೆ. ಇದರಿಂದ ಕೋಪಗೊಂಡ ವರ ವಧುವಿನ ಮನೆಯವರನ್ನು ನಿಂದಿಸಿ ಕೊನೆಗೆ ಮದುವೆಯನ್ನೇ ಕ್ಯಾನ್ಸಲ್ ಮಾಡಿ ಹೊರಟು ಹೋಗಿದ್ದಾನೆ. ನ್ಯಾಯಕ್ಕಾಗಿ ವಧುವಿನ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಮಾತನಾಡಿದ ವಧು, ನಾವೆಲ್ಲರೂ ಬೆಳಗ್ಗೆಯೇ ರೆಡಿಯಾಗಿ ಕುಳಿತಿದ್ದೆವು. ಆದರೆ ಆತ ರೊಟ್ಟಿ ಬಡಿಸಲು ತಡವಾಯಿತೆಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ. ಅಷ್ಟೇ ಅಲ್ಲದೆ ನನ್ನ ಪೋಷಕರನ್ನು ಕೂಡಾ ನಿಂದಿಸಿದ್ದಾನೆ. ಅದಕ್ಕಾಗಿ ನಾನು ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾಯಿತು ಎಂದು ಹೇಳಿಕೊಂಡಿದ್ದಾಳೆ.
ನಂತರ ಎಸ್ಪಿ ಸೂಚನೆ ಮೇರೆಗೆ ಎರಡೂ ಕಡೆಯವರನ್ನು ಹಾಗೂ ಗ್ರಾಮದ ಮುಖಂಡರನ್ನು ಮೊಘಲ್ಸರಾಯ್ ಠಾಣೆಗೆ ಕರೆಸಿ, ರಾಜಿ ಸಂದಾನ ಮಾಡಲಾಯಿತು. ಮಾತುಕತೆಯ ನಂತರ, ಅಂತಿಮವಾಗಿ ಎರಡೂ ಕಡೆಯವರ ನಡುವೆ ಒಪ್ಪಂದ ನಡೆದು ವರನ ಕಡೆಯವರು ವಧುವಿಗೆ 1.61 ಲಕ್ಷ ರೂ. ಪರಿಹಾರ ಧನ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ.