newsics.com
ಮಂಗಳೂರು: ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆಗೈದು ಬಳಿಕ ಪತ್ನಿಯ ಕೊಲೆಗೆ ಯತ್ನಿಸಿದ್ದ ಅಪರಾಧಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ.
ಮುಲ್ಕಿ ಬಳಿಯ ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಅಲಿಯಾಸ್ ಹಿತೇಶ್ ಕುಮಾರ್ (43) ಮರಣದಂಡನೆಗೊಳಗಾಗಿರುವ ಅಪರಾಧಿ.
ತಾಳಿಪಾಡಿಯ ಪದ್ಮನೂರು ಶೆಟ್ಟಿಕಾಡಿನಲ್ಲಿ 2022 ಜೂನ್ 23ರಂದು ಸಂಜೆ ಆರೋಪಿಯು ತನ್ನ 14, 11 ಮತ್ತು 4 ವರ್ಷದ ಮಕ್ಕಳನ್ನು ಮನೆಯ ಬಳಿ ಇರುವ ಬಾವಿಗೆ ತಳ್ಳಿ ಕೊಲೆ ಮಾಡಿದ್ದ. ಅಲ್ಲದೆ, ಕೆಲಸದಿಂದ ಮನೆಗೆ ಬಂದು ಮಕ್ಕಳನ್ನು ಹುಡುಕುತ್ತಿದ್ದ ಹೆಂಡತಿ ಲಕ್ಷ್ಮೀಯನ್ನು ಕೂಡ ಅದೇ ಬಾವಿಗೆ ತಳ್ಳಿ ಕೊಲ್ಲಲು ಯತ್ನಿಸಿದ್ದ.
ಯಾವುದೇ ಕೆಲಸಕ್ಕೆ ಹೋಗದ ಹಿತೇಶ್ ಹೆಂಡತಿ, ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ ಎಂದು ಈ ಕೃತ್ಯ ಎಸಗಿದ್ದ. ಹೆಂಡತಿ ಮಕ್ಕಳನ್ನು ಸಾಯಿಸಿದ್ದಲ್ಲಿ ತಾನು ಹೇಗೆ ಬೇಕಾದರೂ ಜೀವಿಸಬಹುದೆಂದು ಯೋಚಿಸಿ ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ಚಾರ್ಜ್ಶೀಟ್ನಲ್ಲಿ ದಾಖಲಿಸಿದ್ದರು.
ಬಾವಿಗೆ ಬಿದ್ದ ಮಕ್ಕಳು ಬಾವಿಯೊಳಗಿನ ಹಗ್ಗದಲ್ಲಿ ನೇತಾಡುವುದನ್ನು ನೋಡಿದ ಆರೋಪಿ ತಂದೆ ಹಗ್ಗವನ್ನು ತುಂಡರಿಸಿದ್ದ. ಹೆಂಡತಿಯನ್ನು ಬಾವಿಗೆ ದೂಡುವ ವೇಳೆ ಪತ್ನಿ ಈತನ ಕೈಯನ್ನು ಗಟ್ಟಿ ಹಿಡಿದ ಪರಿಣಾಮ ಈತನೂ ಬಾವಿಗೆ ಬಿದ್ದಿದ್ದ. ಬಳಿಕ ನೆರೆಹೊರೆಯವರು ಬಂದು ಇಬ್ಬರನ್ನೂ ಬಾವಿಯಿಂದ ಮೇಲಕ್ಕೆತ್ತಿದ್ದರು.
ಆರೋಪಿಯ ವಿರುದ್ಧ ಮಂಗಳೂರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುಲ್ಕಿ ಪೊಲೀಸ್ ಠಾಣೆಯ ನಿರೀಕ್ಷಕ ಕುಸುಮಾಧರ್ ಕೆ. ಅವರು ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ಕಲಂ 302, 307 ಐಪಿಸಿ ಅಡಿಯಲ್ಲಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ, ತಪ್ಪಿತಸ್ಥನಿಗೆ ಭಾರತೀಯ ದಂಡ ಸಂಹಿತೆ ಕಲಂ 302 ರಡಿ ಅಪರಾಧಕ್ಕೆ ಮರಣದಂಡನೆ/ಗಲ್ಲು ಶಿಕ್ಷೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ 307ರ ಅಡಿಯ ಅಪರಾಧಕ್ಕೆ 10 ವರ್ಷಗಳ ಕಾರಾಗೃಹವಾಸದ ಶಿಕ್ಷೆ ವಿಧಿಸಿದ್ದಾರೆ.
ಮರಣದಂಡನೆಯನ್ನು ಹೈಕೋರ್ಟ್ ಅನುಮೋದಿಸುವವರೆಗೆ ಜಾರಿಗೊಳಿಸದಂತೆ ಜೈಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ನೊಂದ ಮೃತ ತಾಯಿಯಾದ ಲಕ್ಷ್ಮೀ ಅವರಿಗೆ ಸೂಕ್ತ ಪರಿಹಾರವನ್ನು ಕಾನೂನು ಸೇವೆಗಳ ಪ್ರಾಧಿಕಾರವು ನೀಡಬೇಕೆಂದು ನ್ಯಾಯಾಲಯವು ಆದೇಶಿಸಿದೆ.
Fire rain ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿ ಮಳೆ: ವಾಹನ ಸವಾರರು ಕಂಗಾಲು, ವಿಡಿಯೋ ನೋಡಿ
Health Tips ನಿಮ್ಮ ಕಾಲಿನ ಆಕಾರವು ಏನು ಹೇಳುತ್ತದೆ? – ಈ ರೀತಿ ಇರೊವರು ಗುಣವಂತರು
Health Tips ಬೆಳಗ್ಗೆ ತುಪ್ಪ ಸೇವನೆ ಏಕೆ ಮಾಡಬೇಕು? ಪ್ರತಿನಿತ್ಯ ಸೇವಿಸಿದರೆ ಏನೆಲ್ಲಾ ಲಾಭ?