newsics.com
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಭಾನುವಾರ ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಅಭ್ಯಾಸದ ವೇಳೆ ಹಿಟ್ಮ್ಯಾನ್ ಗಾಯಗೊಂಡಿದ್ದು, ಹೀಗಾಗಿ ಅರ್ಧದಲ್ಲೇ ಪ್ರಾಕ್ಟೀಸ್ ನಿಲ್ಲಿಸಿದ್ದಾರೆ.
ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾಗ ಥ್ರೋಡೌನ್ ಸ್ಪೆಷಲಿಸ್ಟ್ ದಯಾ ಅವರು ರೋಹಿತ್ ಶರ್ಮಾಗೆ ಚೆಂಡೆಸೆಯುತ್ತಿದ್ದರು. ಇದೇ ವೇಳೆ ಚೆಂಡು ಅವರ ಎಡ ಮೊಣಕಾಲಿಗೆ ತಾಗಿದೆ. ಇದರಿಂದ ನೋವಿಗೆ ಒಳಗಾದ ರೋಹಿತ್ ಶರ್ಮಾ ತಕ್ಷಣವೇ ಅಭ್ಯಾಸವನ್ನು ನಿಲ್ಲಿಸಿದ್ದಾರೆ. ಅಲ್ಲದೆ ಆ ಬಳಿಕ ಅವರಿಗೆ ಫಿಸಿಯೋ ಆರೈಕೆ ಮಾಡಿದ್ದಾರೆ.
ಈ ಆರೈಕೆಯ ಹೊರತಾಗಿಯೂ ನೋವಿನ ಕಾರಣ ರೋಹಿತ್ ಶರ್ಮಾ ಅಭ್ಯಾಸವನ್ನು ಮುಂದುವರೆಸಲಿಲ್ಲ. ಅಲ್ಲದೆ ನಿಲ್ಲಲು ಕೂಡ ತಡಕಾಡಿದರು. ಹೀಗಾಗಿ ಭಾನುವಾರದ 2ನೇ ಅವಧಿಯ ಅಭ್ಯಾಸದಿಂದ ರೋಹಿತ್ ಶರ್ಮಾ ಹೊರಗುಳಿದರು. ಇದೀಗ ಹಿಟ್ಮ್ಯಾನ್ ಗಾಯಗೊಂಡಿರುವುದು ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.
ಇನ್ನು ನೆಟ್ಸ್ ನಲ್ಲಿ ಅಭ್ಯಾಸ ಮಾಡುವಾಗ ಚೆಂಡು ಬಡಿದು ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಕೈಗೆ ಪೆಟ್ಟಾಗಿದೆ. ಅವರಿಗೆ ತಂಡದ ಫಿಸಿಯೋ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಕೆ.ಎಲ್. ರಾಹುಲ್ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಬಲಗೈಗೆ ಚೆಂಡು ಬಡಿದು ಅವರು ನೋವು ಅನುಭವಿಸಿದ್ದಾರೆ. ಇದೀಗ ರೋಹಿತ್ ಶರ್ಮಾ ಕುಡ ಗಾಯಗೊಂಡಿದ್ದಾರೆ