newsics.com
ರಾಯಚೂರು: ಪಿಡಿಒ ಹುದ್ದೆಗಳ ನೇಮಕಾತಿಗಾಗಿ ಭಾನುವಾರ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೆಪಿಎಸ್ಸಿ ಮಾಡಿದ ಯಡವಟ್ಟಿನಿಂದ ಅಭ್ಯರ್ಥಿಗಳು ಆಕ್ರೋಶ ಹೊರ ಹಾಕಿದ್ದರು. ಸದ್ಯ ಈ ಸಂಬಂಧ ರಾಯಚೂರಿನ ಸಿಂಧನೂರು ತಾಲೂಕಿನಲ್ಲಿ 12 ಪರೀಕ್ಷಾರ್ಥಿಗಳ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಪಿಡಿಒ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ನಾವು ಪರೀಕ್ಷೆ ಬರೆಯಲ್ಲ ಎಂದು ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಪ್ರಥಮ ದರ್ಜೆ ಕಾಲೇಜು ಮುಂಭಾಗ ರಸ್ತೆ ತಡೆದು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಿಸಿ ಪರೀಕ್ಷೆ ಬಹಿಷ್ಕರಣೆ ಸಂಬಂಧಪಟ್ಟಂತೆ ಪರೀಕ್ಷಾರ್ಥಿಗಳ ವಿರುದ್ಧ ದೂರ ದಾಖಲಾಗಿದೆ.
ಪರೀಕ್ಷಾ ಮೇಲ್ವಿಚಾರಕ ಬಸವರಾಜ ತಡಕಲ್ ಪರೀಕ್ಷಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಎಂದು ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ ಎಂದು 12 ಮಂದಿ ವಿರುದ್ಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ರಾಯಚೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೃಷ್ಟಿ ಮಾಂದ್ಯ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅಧಿಕಾರಿಗಳು ಅವಕಾಶ ನೀಡಿಲ್ಲ ಎಂಬ ಆರೋಪ ಕೂಡ ಇದೆ. ಸುಮಾರು 70ಕ್ಕೂ ಅಧಿಕ ಲೊಕೊಮೊಟರ್ ಡಿಸೆಬಿಲಿಟಿ ಮತ್ತು ಬ್ಲೈಂಡ್ ನೆಸ್ ಅಭ್ಯರ್ಥಿಗಳು 16 ಮತ್ತು 17ರಂದು ನಡೆದ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. 2 ಪತ್ರಿಕೆಗೆ ಅನುಮತಿ ನೀಡದೇ ಕೊನೆ ಪತ್ರಿಕೆಗೆ ಮಾತ್ರ ಅವಕಾಶ ನೀಡಿದ್ದಾರೆ. ಈ ಅಭ್ಯರ್ಥಿಗಳಿಗೆ ಹೆಚ್ಚುವರಿ 20 ನಿಮಿಷ ಸಮಯ ನೀಡಲು ಕೆಪಿಎಸ್ಸಿ ನಿಯಮವಿದೆ. ಆದ್ರೆ ಇದನ್ನ ಪ್ರಶ್ನೆ ಮಾಡಿದವರಿಗೆ ಜೀವನದಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆಯದಂತೆ ಮಾಡುತ್ತೇವೆ ಎಂದು ಗದರಿದ್ದಾರೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.