newsics.com
ಬೆಂಗಳೂರು: ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ನರೇಂದ್ರ ಮೋದಿ ಪರ ಮತ ಕೇಳಿದ್ದಕ್ಕೆ ಮಂಗಳೂರಿನ ಸುಳ್ಯದ ಶಿವಪ್ರಸಾದ್ ವಿರುದ್ಧ ಚುನಾವಣಾ ಅಧಿಕಾರಿ ಹೂಡಿದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯವರಾದ ಶಿವಪ್ರಸಾದ್ ಅವರ ವಿವಾಹ ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿ ಮೋದಿಗೆ ಮತ ಯಾಚಿಸಿದ್ದಕ್ಕೆ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಆದರೆ, ಆಹ್ವಾನ ಪತ್ರಿಕೆ ನೀತಿ ಸಂಹಿತೆ ಜಾರಿಗೆ ಮೊದಲು ಮುದ್ರಣವಾಗಿದ್ದ ಕಾರಣ ಹೈಕೋರ್ಟ್ ಕೇಸ್ಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಮೋದಿಗೆ ಮತ ಹಾಕಿದರೆ ನನಗೆ ಉಡುಗೊರೆ ನೀಡಿದಂತೆ ಎಂದು ಮದುವೆ ಆಹ್ವಾನ ಪತ್ರಿಕೆಯಲ್ಲಿ ಶಿವಪ್ರಸಾದ್ ಉಲ್ಲೇಖಿಸಿದ್ದರು. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ವರನ ವಿರುದ್ಧ ಏಪ್ರಿಲ್ 17ರಂದು ಚುನಾವಣಾ ನೋಡಲ್ ಅಧಿಕಾರಿಗಳಿಗೆ ದೂರು ಬಂದಿತ್ತು. ನಂತರ ಚುನಾವಣಾಧಿಕಾರಿಗಳು ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಿ ಮದುಮಗನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇನ್ನು ಮದುಮಗ ಪರ ವಕೀಲ ಎಂ.ವಿನೋದ್ ಕುಮಾರ್ ಕೇಸ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 1ರಂದು ಮದುವೆ ಆಹ್ವಾನ ಪತ್ರಿಕೆ ಮುದ್ರಣವಾಗಿದೆ. ಆದರೆ ಚುನಾವಣಾ ನೀತಿಸಂಹಿತೆ ಮಾರ್ಚ್ 16ರಂದು ಜಾರಿಯಾಗಿದೆ. ಹೀಗಾಗಿ ಕೇಸ್ ರದ್ದು ಮಾಡುವಂತೆ ವಕೀಲ ಎಂ.ವಿನೋದ್ ಕುಮಾರ್ ಮನವಿ ಮಾಡಿದರು. ವಾದವನ್ನು ಆಲಿಸಿದ ಹೈಕೋರ್ಟ್ ಕೇಸ್ಗೆ ತಡೆಯಾಜ್ಞೆ ನೀಡಿದೆ.