newsics.com
ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಆರೋಗ್ಯದ ಬಗ್ಗೆ ಆಗಾಗ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶಿವರಾಜಕುಮಾರ್ ಅವರ ಅನಾರೋಗ್ಯ ಬಗೆಗಿನ ಸುದ್ದಿಗಳು ಜೋರಾಗಿಯೇ ಹರಿದಾಡಿದ್ದವು.
ಈಗ ಶಿವರಾಜ್ ಕುಮಾರ್ ಅವರೇ ಈ ವಿಷಯ ಪ್ರಸ್ತಾಪಿಸಿದ್ದು, ನನಗೆ ಆರೋಗ್ಯ ಸಮಸ್ಯೆಯಿರುವುದು ನಿಜ. ಅಭಿಮಾನಿಗಳು ಧೈರ್ಯವಾಗಿರಬೇಕು. ನನ್ನ ಆರೋಗ್ಯ ಸ್ಥಿತಿಯಲ್ಲಿ ಸ್ವಲ್ಪ ಸಮಸ್ಯೆ ಆಗಿದೆ. ಈಗಾಗಲೇ ಚಿಕಿತ್ಸೆಯೂ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಆರೋಗ್ಯದ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ. ನಾನೂ ಮನುಷ್ಯಾನೇ. ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ. 4 ಸೆಷನ್ ಇದೆ. ಧೈರ್ಯವಾಗಿದ್ದೇನೆ. ನಾನು ಹಲವು ಸಿನಿಮಾಗಳನ್ನು ಕಂಪ್ಲೀಟ್ ಮಾಡಿದ್ದೇನೆ. ಭೈರತಿ ರಣಗಲ್ ಸಿನಿಮಾ ಪ್ರಮೋಷನ್ ಕೂಡ ಮಾಡಿರುವೆ. ಇನ್ನೊಂದು ಎರಡು ಸೆಷನ್ ಇದೆ. ಸರ್ಜರಿ ಕೂಡ ಇದೆ. ಅಮೆರಿಕದಲ್ಲಿ ಸರ್ಜರಿ ಇದೆ.
ಆಪರೇಷನ್ ಆದ್ಮೇಲೆ ಮುಗಿತು ನೋಡಿ. ಏನೂ ತೊಂದರೆ ಆಗೋದಿಲ್ಲ. ಎಂದಿನಂತೆ ನಿಮ್ಮ ಶಿವಣ್ಣ ಆಕ್ಟೀವ್ ಆಗಿಯೇ ಇರ್ತಾರೆ. ಏನೂ ತೊಂದರೆ ಇರೋದಿಲ್ಲ. ಎಲ್ಲವೂ ಎಂದಿನಂತೆಯೇ ಇರುತ್ತದೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.
ಈ ವಿಷಯ ನಟ ಸುದೀಪ್, ಯಶ್ ಅವರಿಗೂ ಗೊತ್ತದೆ ಎಂದೂ ಶಿವಣ್ಣ ಹೇಳಿದ್ದಾರೆ. ಕೆಲವರು ಫೋಟೋ ತಗೋತಾರೆ. ಆದರೆ ನಾನು ಸೈಡ್ಗೆ ನಿಲ್ಲುತ್ತೇನೆ. ಸೂಕ್ಷ್ಮವಾಗಿ ಹೇಳಬೇಕು. ಮುಚ್ಚಿಡೋದು ಬೇಡ ಎಂದು ಗೀತಾಳಿಗೂ ಹೇಳಿರುವೆ. ನಾನು ಧೈರ್ಯವಾಗಿ ಇದ್ದೇನೆ ಎಂದರೆ ಜನಗಳ ಪ್ರೀತಿ ಅದು.
ಒಂದೆರಡು ತಿಂಗಳು ಕಾಯಬೇಕು. ಬ್ಯುಸಿಯಾಗಿದ್ದವರು ಯಾಕೆ ಹೀಗೆ ಆದರು ಎಂಬ ಡೌಟ್ ಕೆಲವರಲ್ಲಿ ಇದೆ. ರಾಮ್ಚರಣ್ ಸಿನಿಮಾಗೂ ಡೇಟ್ ಕೊಡುವುದಾಗಿ ಹೇಳಿರುವೆ. ಜನಗಳಿಗೆ ಗೊತ್ತಾಗಲಿ ಎಂಬ ಆಸೆ ನನ್ನದು. ಅವರಿಗೆ ಗೊತ್ತಾಗತ್ತೆ ಎಂದಿದ್ದಾರೆ.
ಶಿವರಾಜ್ ಕುಮಾರ್ ಭೈರತಿ ರಣಗಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಮಫ್ತಿ ಸಿನಿಮಾದ ಪ್ರೀಕ್ವೆಲ್. ಮಫ್ತಿ ಸಿನಿಮಾದಲ್ಲಿ ಶಿವಣ್ಣ ಹಾಗೂ ಮುರಳಿ ನಟಿಸಿದ್ದರು. ಈಗ ಈ ಸಿನಿಮಾದಲ್ಲಿ ಶಿವಣ್ಣ ಮತ್ತೆ ಭೈರತಿ ರಣಗಲ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಮಫ್ತಿ’ ಸಿನಿಮಾ ನೋಡಿದ ಬಹುತೇಕರಿಗೆ ಕಾಡುವ ಪಾತ್ರ ‘ಭೈರತಿ ರಣಗಲ್. ಆ ಪಾತ್ರಕ್ಕೆ ಇರುವ ತಾಕತ್ತೇ ಬೇರೆ. ಚಿತ್ರಮಂದಿರದಿಂದ ಹೊರ ಬಂದ ಮೇಲೆಯೂ ಆ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ.
ಕೆಲ ವರ್ಷಗಳ ಹಿಂದೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಕನಕಪುರದ ಬಳಿ ಜಮೀನು ಖರೀದಿ ಮಾಡಿದ್ದರು. ಅಲ್ಲಿ ಈಗ ಬೃಹತ್ ಫಾರ್ಮ್ ಹೌಸ್ ನಿರ್ಮಾಣ ಮಾಡಿದ್ದಾರೆ. ಈ ಫಾರ್ಮ್ ಹೌಸ್ ಗೃಹಪ್ರವೇಶವನ್ನು ಇತ್ತೀಚೆಗೆ ಶಿವರಾಜ್ ಕುಮಾರ್ ಮತ್ತು ಕುಟುಂಬದವರು ಮಾಡಿದ್ದಾರೆ.