newsics.com
ಮೈಸೂರು: ದಸರಾ ಆನೆ ಕಂಜನ್ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ರಸ್ತೆಗೆ ನುಗ್ಗಿ ಅಡ್ಡಾದಿಡ್ಡಿ ಓಡಿದ್ದು, ಜನ ಭಯದಿಂದ ದಿಕ್ಕಾಪಾಲಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡಿದ್ದು, ಕಾಲಿಗೆ ಕಟ್ಟಿದ್ದ ಸರಪಳಿ ಕಿತ್ತು ಓಡಿದ ಆನೆ ಕಂಜನ್ ನಿಯಂತ್ರಿಸಲು ಮಾವುತರು ಪರದಾಡಿದ್ದಾರೆ. ಕಂಜನ್ ಹಿಂದೆಯೇ ಓಡಿದ ದಸರಾ ಗಜಪಡೆಯ ಆನೆ ಮಹೇಂದ್ರ ಕಂಜನ್ನ್ನು ನಿಯಂತ್ರಿಸಲು ಪ್ರಯತ್ನಿಸಿದೆ. ಆದರೂ ಸಾಧ್ಯವಾಗಿಲ್ಲ. ಎರಡು ಆನೆ ಓಡುತ್ತಿರುವುದನ್ನು ಕಂಡ ಜನ ಭಯಭೀತರಾಗಿ ಓಡಿದ್ದಾರೆ.
ಅರಮನೆ ಹೊರ ಆವರಣ ದಾಟಿ ಓಡಿದ ಆನೆ ಕಂಜನ್, ದೊಡ್ಡಕೆರೆ ಮೈದಾನದ ಬಳಿಯ ಬೆಂಗಳೂರು- ನೀಲಗಿರಿ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳನ್ನು ನೋಡಿ ಅಲ್ಲಿಯೇ ನಿಂತಿದೆ. ಬಳಿಕ ಮಾವುತರು ಕಂಜನ್ ಆನೆಯನ್ನು ಸಮಾಧಾನಪಡಿಸಿ ಮರಳಿ ಕರೆತಂದಿದ್ದಾರೆ.
ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ಕೆಲ ಕಾಲ ಆತಂಕ ಸೃಷ್ಟಿಯಾದದ್ದಂತೂ ನಿಜ.
ಶುಕ್ರವಾರ ರಾತ್ರಿ 7:45ರ ಸಮಯದಲ್ಲಿ ಆಹಾರ ತಿನ್ನುವ ಸಂದರ್ಭದಲ್ಲಿ ಧನಂಜಯ ಹಾಗೂ ಕಂಜನ್ ಆನೆಗಳ ನಡುವೆ ಗುದ್ದಾಟ ಶುರುವಾಗಿದೆ. ಅರಮನೆಯ ಜಯ ಮಾರ್ತಾಂಡ ದ್ವಾರದ ಬಳಿ ಏಕಾಏಕಿ ಕಂಜನ್ ಹಾಗೂ ಧನಂಜಯ ಆನೆಗಳು ಓಡುತ್ತಾ ಹೊರಬಂದವು. ಮಾವುತನಿಲ್ಲದ ಕಂಜನ್ ಆನೆಯನ್ನು ಧನಂಜಯ್ ಆನೆ ಅರಮನೆಯಿಂದ ಹೊರಗೆ ಓಡಿಸಿಕೊಂಡು ಬಂದಿದೆ.
ದುಬಾರೆ ಆನೆ ಶಿಬಿರದ 25 ವರ್ಷದ ಕಂಜನ್ ಆನೆ ಎರಡನೇ ಬಾರಿ ದಸರಾದಲ್ಲಿ ಭಾಗವಹಿಸುತ್ತಿದೆ. ಆದರೆ ಈ ಬಾರಿ ಕಾಲಿಗೆ ಗಾಯವಾದ ಕಾರಣ ತಾಲೀಮಿನಿಂದ ವಿನಾಯಿತಿ ನೀಡಿ ವಿಶ್ರಾಂತಿ ನೀಡಲಾಗಿತ್ತು. ಅರಮನೆಯಿಂದ ಹೊರಗೆ ಓಡುವಾಗಲೂ ಅದು ಕುಂಟುತ್ತಾ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ನಾಡೋಜ ಡಾ.ಹಂಪನಾ ಈ ಬಾರಿಯ ದಸರಾ ಉದ್ಘಾಟಕರು: ಸಿಎಂ ಘೋಷಣೆಗೆ ಹಿರಿಯ ಸಾಹಿತಿ ಸಂತಸ