newsics.com
ಪ್ಯಾರಿಸ್: ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಅಥ್ಲಿಟ್ಗಳ ಪದಕ ಬೇಟೆ ಮುಂದುವರಿದಿದೆ. ಸೋಮವಾರ ಒಂದೇ ದಿನ ಎರಡು ಚಿನ್ನ, 3 ಬೆಳ್ಳಿ, ಎರಡು ಕಂಚು ಸೇರಿ ಒಟ್ಟೂ ಏಳು ಪದಕಗಳನ್ನು ಭಾರತ ಬಾಚಿಕೊಂಡಿದೆ.
ಕನ್ನಡಿಗ ಸುಹಾಸ್ ಯತಿರಾಜ್ ಕೂಡ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಮೂಲಕ ಭಾರತದ ಕ್ರೀಡಾಭಿಮಾನಿಗಳ ಸಂತಸ ಹೆಚ್ಚಿಸಿದ್ದಾರೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ಎಲ್ 4 ವಿಭಾಗದಲ್ಲಿ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಫೈನಲ್ ಪಂದ್ಯದಲ್ಲಿ ಫ್ರಾನ್ಸ್ನ ಲೂಕಾಸ್ ಮಜೂರ್ ವಿರುದ್ಧ ನೇರ ಗೇಮ್ಗಳಲ್ಲಿ ಸೋತ ಬಳಿಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್ ತಲುಪಿದ್ದ ಸುಹಾಸ್ ಯತಿರಾಜ್, ಲಾ ಚಾಪೆಲ್ಲೆ ಅರೆನಾದಲ್ಲಿ ನಡೆದ ಚಿನ್ನದ ಪದಕದ ಪಂದ್ಯದಲ್ಲಿ ಫ್ರಾನ್ಸ್ನ ಲುಕಾಸ್ ಮಜೂರ್ ವಿರುದ್ಧ 9-21, 9-21 ಸೆಟ್ಗಳಿಂದ ಸೋತರು. 34 ನಿಮಿಷಗಳಲ್ಲಿ ಫೈನಲ್ ಪಂದ್ಯ ಮುಕ್ತಾಯವಾಯಿತು.
ಎಸ್ಎಲ್4 ಅನ್ನು ದೇಹದ ಒಂದು ಬದಿಯಲ್ಲಿ, ಎರಡೂ ಕಾಲುಗಳಲ್ಲಿ ಸೀಮಿತ ಚಲನೆಯನ್ನು ಅನುಭವಿಸುವ ಆಟಗಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಅಗ್ರ ಶ್ರೇಯಾಂಕಿತ ಆಗಿರುವ ಸುಹಾಸ್ ಈ ಬಾರಿ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕದಿಂದ ವಂಚಿತರಾದರು.
ವಿಶ್ವ ಚಾಂಪಿಯನ್ಶಿಪ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿರುವ ಸುಹಾಸ್, ಪ್ಯಾರಾಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶ ನೀಡುವಲ್ಲಿ ವಿಫಲವಾದರು. ಫ್ರಾನ್ಸ್ ಆಟಗಾರ ಪಂದ್ಯದಲ್ಲಿ ಸಂಪೂರ್ಣವಾಗಿ ಮೇಲುಗೈ ಸಾಧಿಸಿದರು. ಸುಹಾಸ್ ಮೊದಲ ಗೇಮ್ನಲ್ಲಿ 12 ಪಾಯಿಂಟ್ಗಳ ಬೃಹತ್ ಮುನ್ನಡೆಯನ್ನು ಬಿಟ್ಟುಕೊಟ್ಟರು. ಎರಡನೇ ಗೇಮ್ನಲ್ಲಿ ಸುಹಾಸ್ ಹೋರಾಟ ಕೊಟ್ಟರು ಕೂಡ ಫ್ರೆಂಚ್ ಆಟಗಾರ ಸಂಪೂರ್ಣವಾಗಿ ಮೇಲುಗೈ ಸಾಧಿಸಿದರು.
ಸುಹಾಸ್ ಯತಿರಾಜ್ ಕರ್ನಾಟಕದ ಹಾಸನ ಹುಡುಗ. ಅವರು ಕ್ರೀಡೆ ಮತ್ತು ಶಿಕ್ಷಣದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಐಎಎಸ್ ಅಧಿಕಾರಿಯಾಗಿರುವ ಸುಹಾಸ್ ತಮ್ಮ ಜನಪರ ಆಡಳಿತದಿಂದ ಕೂಡ ಸಾಕಷ್ಟು ಹೆಸರು ಮಾಡಿದ್ದಾರೆ. ಸುಹಾಸ್ ಸುರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದರು. 2006 ರಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪಾಸಾದರು.
ಗೌತಮ್ ಬುದ್ಧ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪ್ರಯಾಗ್ರಾಜ್ ಸೇರಿದಂತೆ ವಿವಿಧ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮತ್ತು ಸೇವೆ ಸಲ್ಲಿಸುತ್ತಿರುವ ಏಕೈಕ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರ ಸಾಧನೆಗೆ ಅರ್ಜುನ ಪ್ರಶಸ್ತಿ ಮತ್ತು ಉತ್ತರ ಪ್ರದೇಶದ ಅತ್ಯುನ್ನತ ನಾಗರಿಕ ಗೌರವವಾದ ಯಶ್ ಭಾರತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.