newsics.com
ಪರಪ್ಪನ ಅಗ್ರಹಾರದಲ್ಲಿ ಇರುವ ದರ್ಶನ್ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಜಾಮೀನು ಪಡೆದು ಹೊರಗಿರುವ ರೌಡಿಶೀಟರ್ ಸತ್ಯ ಜೊತೆ ದರ್ಶನ್ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದರು. ಆ ವಿಡಿಯೋ ಎಲ್ಲ ಕಡೆಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ಕಾಲ್ ವಿಚಾರ ಬಹಿರಂಗ ಆದ ಕೂಡಲೇ ಪೊಲೀಸರು ಕ್ರಮ ಕೈಕೊಂಡಿದ್ದಾರೆ. ದರ್ಶನ್ ಜತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ ಸತ್ಯನನ್ನು ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಮಂಡ್ಯದಲ್ಲಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ.
ವಿಚಾರಣಾಧೀನ ಖೈದಿ ಆಗಿರುವ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನೊಳಗೆ ಅಕ್ರಮವಾಗಿ ಅನೇಕ ಸೌಕರ್ಯಗಳನ್ನು ಒದಗಿಸಲಾಗಿದೆ. ರೌಡಿಗಳ ಜೊತೆ ಸಂಪರ್ಕ, ಗಾರ್ಡನ್ ಏರಿಯಾದಲ್ಲಿ ಹರಟೆ ಹೊಡೆಯುವ ಅವಕಾಶ, ಸೀಗರೇಟ್, ಕುರ್ಚಿ ಸೇರಿದಂತೆ ವಿಐಪಿ ಟ್ರೀಟ್ಮೆಂಟ್ ಸಿಕ್ಕಿದೆ. ಅದರ ಜೊತೆಗೆ ವಿಡಿಯೋ ಕಾಲ್ ಕೂಡ ಮಾಡಿರುವುದು ಬಹಿರಂಗ ಆಗಿದ್ದು, ದೊಡ್ಡ ಸಂಚಲನ ಸೃಷ್ಟಿ ಮಾಡಿದೆ.
ದರ್ಶನ್ ಗೆ ಇರುವ ಅಭಿಮಾನಿ ಬಳಗ ದೊಡ್ಡದು. ದರ್ಶನ್ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ ಕ್ಲಿಪಿಂಗ್ ಇಟ್ಟುಕೊಂಡ ಸತ್ಯ ಕಲಾಸಿಪಾಳ್ಯದ ಒಂದಷ್ಟು ಹುಡುಗರಿಗೆ ಕಳಿಸಿದ್ದ. ಅಲ್ಲದೇ ತನ್ನ ಏರಿಯಾದಲ್ಲಿ ಬಿಲ್ಡಪ್ ಕೊಡಲು ಈ ವಿಡಿಯೋ ತುಣುಕನ್ನು ಬಳಸಿಕೊಂಡಿದ್ದ. ಸಹಚರರ ವಾಟ್ಸಪ್ ಸ್ಟೇಟಸ್ನಲ್ಲೂ ಅದನ್ನು ಅಪ್ಲೋಡ್ ಮಾಡಲಾಗಿತ್ತು. ಆದ್ದರಿಂದ ದರ್ಶನ್ ಜೊತೆಗಿನ ಆತನ ವಿಡಿಯೋ ಕಾಲ್ ಎಲ್ಲ ಕಡೆಗಳಲ್ಲಿ ವೈರಲ್ ಆಯಿತು.